ADVERTISEMENT

ಸಿರಿಧಾನ್ಯ ಸಂಸ್ಕರಣಾ ಘಟಕಕ್ಕೆ ₹5 ಲಕ್ಷ

ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್.ಮಹದೇವು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 15:34 IST
Last Updated 17 ನವೆಂಬರ್ 2019, 15:34 IST
ಹಲಗೂರು ಸಮೀಪದ ಗುಂಡಾಪುರ ಗ್ರಾಮದ ರೈತ ಪುಟ್ಟಂಕಯ್ಯ ಅವರ ಜಮೀನಿನಲ್ಲಿ ಬೆಳೆದಿದ್ದ ಸಿರಿಧಾನ್ಯಗಳ ಬಗ್ಗೆ ಮಾಹಿತಿ ಪಡೆದ ರೈತರು
ಹಲಗೂರು ಸಮೀಪದ ಗುಂಡಾಪುರ ಗ್ರಾಮದ ರೈತ ಪುಟ್ಟಂಕಯ್ಯ ಅವರ ಜಮೀನಿನಲ್ಲಿ ಬೆಳೆದಿದ್ದ ಸಿರಿಧಾನ್ಯಗಳ ಬಗ್ಗೆ ಮಾಹಿತಿ ಪಡೆದ ರೈತರು   

ಹಲಗೂರು: ಸಿರಿಧಾನ್ಯಗಳ ಸಂಸ್ಕರಣಾ ಘಟಕ ನಿರ್ಮಾಣ ಮಾಡುವವರಿಗೆ ಕೃಷಿ ಇಲಾಖೆ ₹5 ಲಕ್ಷ ಸಹಾಯಧನ ನೀಡಲಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್.ಮಹದೇವು ತಿಳಿಸಿದರು.

ಹಲಗೂರು ರೈತ ಸಂಪರ್ಕ ಕೇಂದ್ರದ ವತಿಯಿಂದ ಸಮೀಪದ ಗುಂಡಾಪುರ ಗ್ರಾಮದ ರೈತ ಪುಟ್ಟಂಕಯ್ಯ ಅವರ ಜಮೀನಿನಲ್ಲಿ ಆಯೋಜಿಸಿದ್ದ ‘ಸಿರಿಧಾನ್ಯ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.‌

ಸಿರಿಧಾನ್ಯಗಳಿಗೆ ಸರ್ಕಾರದಿಂದ ಬೆಂಬಲ ಬೆಲೆ ಸಿಗುವ ನಿರೀಕ್ಷೆ ಇದೆ. ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್‌ಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆಸಕ್ತರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮುಂದೆ ಬರಬಹುದು ಎಂದರು.

ADVERTISEMENT

ವಿವಿಧ ರೋಗಗಳಿಗೆ ಸಿರಿಧಾನ್ಯಗಳು ರಾಮಬಾಣವಿದ್ದಂತೆ. ಈ ಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ರೈತರು ಇವುಗಳನ್ನು ಬೆಳೆಯಲು ಮುಂದಾಗಬೇಕು. ಕಡಿಮೆ ನೀರಿನಲ್ಲಿ ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು, ರಾಗಿ ಬೆಳೆಗಳನ್ನು ಬೆಳೆಯಬಹುದು ಎಂದು ತಿಳಿಸಿದರು.

ಸಹಾಯಕ ಕೃಷಿ ಅಧಿಕಾರಿ ಮಹದೇವಯ್ಯ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಸುರೇಂದ್ರ ಮೂರ್ತಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರಸನ್ನ ಕುಮಾರ್, ತಮ್ಮಣ್ಣಗೌಡ, ಗ್ರಾಮ ಲೆಕ್ಕಿಗರಾದ ನಾಗವೇಣಿ ಇದ್ದರು.

‘ಶೇ 16ರಷ್ಟು ನಾರಿನಾಂಶ’

ಅಕ್ಕಿಯಲ್ಲಿ ಶೇ 2ರಷ್ಟು ನಾರಿನಾಂಶ ಇರುತ್ತದೆ. ಅದನ್ನು ಹೊಳಪು ಮಾಡಿ, ನಾರಿನಾಂಶ ಕಡಿಮೆ ಮಾಡಿ ಬಳಕೆ ಮಾಡುತ್ತಿದ್ದೇವೆ. ಆದರೆ, ಸಿರಿಧಾನ್ಯಗಳಾದ ಬರಗು, ಕೊರಲು ಧಾನ್ಯಗಳಲ್ಲಿ ಶೇ 16ರಷ್ಟು ನಾರಿನಾಂಶವಿದ್ದು, ಜೀರ್ಣಕ್ರಿಯೆಗೂ ಉತ್ತಮವಾಗಿದೆ ಎಂದು ಬಿ.ಎಸ್.ಮಹದೇವು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.