ಮಂಡ್ಯ: ನಾನು ಬಿಜೆಪಿ ಸೇರುತ್ತಿಲ್ಲ, ಪಕ್ಷೇತರ ಸಂಸದೆಯಾಗಿಯೇ ಉಳಿಯುತ್ತೇನೆ. ಬಿಜೆಪಿ ಸರ್ಕಾರಕ್ಕೆ ಬಹುಮತವಿದೆ, ನನ್ನ ಅವಶ್ಯಕತೆ ಕೇಂದ್ರ ಸರ್ಕಾರಕ್ಕೆ ಇಲ್ಲ’ ಎಂದು ಸುಮಲತಾ ಹೇಳಿದರು.
‘ಸಂಸದೆ ಸುಮಲತಾ ಅವರ ಫಾರಿನ್ ಟೂರ್ ಮುಗಿದಿಲ್ಲ’ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಬುಧವಾರ ನಗರದಲ್ಲಿ ತಿರುಗೇಟು ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಎಚ್.ಡಿ.ಕುಮಾರಸ್ವಾಮಿ ಅವರ ಕ್ಯಾಸಿನೋ ಎಂಜಾಯ್ಮೆಂಟ್ ಬಗ್ಗೆ ಗೊತ್ತಿದೆ. ಹೊರ ದೇಶದಲ್ಲಿ ಯಾರಿದ್ದರು, ಹೇಗಿದ್ದರು ಎಂಬ ಬಗ್ಗೆ ಛಾಯಾಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಯಾರು, ಏನು ಎಂಬುದೂ ಜನರಿಗೂ ಗೊತ್ತಿದೆ. ನನ್ನ ವಿದೇಶ ಯಾತ್ರೆ ಬಗ್ಗೆ ಅವರು ಮಾತನಾಡಬೇಕಾಗಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಜೋಡೆತ್ತು ಈಗೆಲ್ಲಿ ಎಂಬ ಎಲ್.ಆರ್.ಶಿವರಾಮೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ಯಲ್ಲಿ 8 ಮಂದಿ ಶಾಸಕರು ಇದ್ದಾರೆ. ನಾನೊಬ್ಬಳು ಗೆದ್ದ ಮಾತ್ರಕ್ಕೆ ಶಾಸಕರೆಲ್ಲರ ಜವಾಬ್ದಾರಿ ಮುಗಿದಿದೆಯೇ, ಸೌಲಭ್ಯಗಳು ಕಡಿತವಾಗಿವೆಯೇ? ನಾನು ಗೆದ್ದು ಮೂರು ತಿಂಗಳಾಗಿದೆ, ಆಗಲೇ, ಏನೂ ಕೆಲಸ ಮಾಡಿಲ್ಲ ಎಂದರೆ ಹೇಗೆ? ಇದೆಲ್ಲಾ ರಾಜಕೀಯ ಆಟ’ ಎಂದರು.
ಬಿಜೆಪಿ ಕಚೇರಿಗೆ ಭೇಟಿ; ಅಸಮಾಧಾನ:
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಸುಮಲತಾ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು. ಇದು ವಿವಾದ ರೂಪ ಪಡೆದಿದ್ದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅವರ ಬೆಂಬಲಿಗ ಡಾ.ರವೀಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ತಪ್ಪಲ್ಲ. ಆದರೆ ಅದಕ್ಕಾಗಿ ಬಿಜೆಪಿ ಕಚೇರಿಗೆ ತೆರಳುವುದು ಎಷ್ಟು ಸರಿ? ಸುಮಲತಾ ಅವರು ಸ್ವಾಭಿಮಾನದ ಅಭ್ಯರ್ಥಿಯಾಗಿದ್ದರು, ಅವರಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಿದ್ದರು, ಕಾಂಗ್ರೆಸ್ ಬೆಂಬಲವೂ ಇತ್ತು. ನಾಳೆ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡುತ್ತಾರಾ? ಜಿಲ್ಲಾ ಪ್ರವಾಸ ಕೈಗೊಂಡು ಸರ್ವರಿಗೂ ಕೃತಜ್ಞತೆ ಸಲ್ಲಿಸಬಹುದಾಗಿತ್ತು’ ಎಂದರು.
ಬಿಜೆಪಿ ಸೇರಲ್ಲ: ಸ್ಟಷ್ಟನೆ
‘ನಾನು ಬಿಜೆಪಿ ಸೇರುತ್ತಿದ್ದೇನೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಬಿಜೆಪಿ ಸೇರುವುದಾದರೆ ಅದನ್ನು ಗೋಪ್ಯವಾಗಿ ಇಟ್ಟುಕೊಳ್ಳುವ ಅವಶ್ಯಕತೆ ಇರಲಿಲ್ಲ, ಮಾಧ್ಯಮಗಳಿಗೆ ತಿಳಿಸಿಯೇ ಸೇರ್ಪಡೆಯಾಗುತ್ತಿದ್ದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.