ಕೆರಗೋಡು: ಸಮೀಪದ ಹೊಡಾಘಟ್ಟ ಗ್ರಾಮದಲ್ಲಿ ಯುವಕನ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಮೀಪದ ಆಲಕೆರೆ ಗ್ರಾಮದ ನಾಗರಾಜು ಪುತ್ರ ಹೇಮಂತ್ ಬಂಧಿತ ಆರೋಪಿ. ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದುಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಹೊಡಾಘಟ್ಟ ಗ್ರಾಮದ ಅಭಿಷೇಕ್ ಮುದ್ದುಂಗೆರೆ ಗ್ರಾಮದ ಹೊರ ವಲಯದಲ್ಲಿ ಸೆ.19 ರಂದು ಸ್ನೇಹಿತರ ಜತೆಗೂಡಿ ಪಾರ್ಟಿ ಮಾಡುತ್ತಿದ್ದಾಗ ಕುಡಿದ ಮತ್ತಿನಲ್ಲಿ ಆರೋಪಿ ಹೇಮಂತ್ ಜತೆ ಕ್ಷುಲ್ಲಕ ವಿಚಾರಕ್ಕಾಗಿ ಗಲಾಟೆ ನಡೆದು ಹೊಡೆದಾಟ ನಡೆದಿತ್ತು. ಘಟನೆ ಬಳಿಕ ಗ್ರಾಮಕ್ಕೆ ವಾಪಸ್ ಆಗಿದ್ದ ಅಭಿಷೇಕ್ ಊಟ ಮಾಡಿ ಪ್ರತ್ಯೇಕ ಮನೆಯಲ್ಲಿ ಮಲಗಿದ್ದನು. ಏಟು ತಿಂದು ರೊಚ್ಚಿಗೆದ್ದಿದ್ದ ಆಲಕೆರೆ ಗ್ರಾಮದ ಹೇಮಂತ್ ಸ್ನೇಹಿತನನ್ನು ಕರೆದುಕೊಂಡು ಅಂದೇ ರಾತ್ರಿ ಹೊಡಾಘಟ್ಟ ಗ್ರಾಮಕ್ಕೆ ಬಂದು ಅಭಿಷೇಕನಿಗೆ ದೂರವಾಣಿ ಕರೆ ಮಾಡಿ ಕರೆದಿದ್ದಾರೆ. ಅಭಿಷೇಕ್ ದಾರಿಯಲ್ಲಿ ಬರುತ್ತಿದ್ದ ವೇಳೆ ಹೇಮಂತ್ ಮತ್ತು ಅವನ ಸ್ನೇಹಿತ ಗ್ರಾಮದ ನಡು ಬೀದಿಯಲ್ಲೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಇದೀಗ ಹೇಮಂತ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.