ಕೆ.ಆರ್.ಪೇಟೆ : ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ದುಷ್ಕರ್ಮಿಗಳು ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಗುಂಡಣ್ಣ(50) , ಲಲಿತಮ್ಮ(45) ಕೊಲೆಯಾದ ದಂಪತಿ. ಕಳೆದ ನಾಲ್ಕೈದು ದಿನದ ಹಿಂದೆಯೇ ಕಿಡಿಗೇಡಿಗಳು ಮನೆಯಲ್ಲಿ ಕೊಲೆ ಮಾಡಿ ಬಾಗಿಲು ಮುಚ್ಚಿಕೊಂಡು ತೆರಳಿದ್ದಾರೆ. ಶವಗಳು ಕೊಳತು ವಾಸನೆ ಹರಡಿದ ಕಾರಣ ಶುಕ್ರವಾರ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ ಘಟನೆ ಯಾರ ಗಮನಕ್ಕೂ ಬಂದಿಲ್ಲ.
ಶವಗಳ ಮೇಲೆ ಹಲ್ಲೆ ಮಾಡಿರುವ ಗುರುತುಗಳಿದ್ದು ಇದು ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬಾಗಿಲು ಮುಚ್ಚಿದ್ದು ದಂಪತಿ ಹೊರಗೆ ಹೋಗಿರಬಹುದು ಎಂದು ಅಕ್ಕಪಕ್ಕದ ಮನೆಯವರು ಭಾವಿಸಿದ್ದರು. ಶುಕ್ರವಾರ ಮನೆಗೆ ತೆರಳಿ ನೋಡಿದಾಗ ಕೊಲೆಯಾಗಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಡಿವೈಎಸ್ ಪಿ.ವಿಶ್ವನಾಥ್, ಸರ್ಕಲ್ ಇನ್ಸ್ಪೆಕ್ಟರ್ ಕೆ.ಎನ್.ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮಾಹಿತಿ ಪಡೆದರು. ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಿ ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದರು.
ಪ್ರಕರಣವನ್ನು ಕೂಡಲೇ ಭೇದಿಸಿ ದಂಪತಿ ಕೊಲೆಗೆ ನ್ಯಾಯ ಕೊಡಿಸಬೇಕು. ಗ್ರಾಮವು ಅರಣ್ಯ ಪ್ರದೇಶದ ಪಕ್ಕದಲ್ಲಿ ಇರುವುದರಿಂದ ರಾತ್ರಿಯ ವೇಳೆ ಪೊಲೀಸರ ಗಸ್ತು ಹೆಚ್ಚಿಸಬೇಕು ಎಂದು ಗ್ರಾಮದ ಪಂಚಾಯಿತಿ ಸದಸ್ಯ ದೇವಾನಂದ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.