
ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆ.ಆರ್.ಎಸ್ ಬೃಂದಾವನದ ‘ಸಂಗೀತ ನೃತ್ಯ ಕಾರಂಜಿ’ ಪ್ರದರ್ಶನದ ತಂತ್ರಾಂಶದಲ್ಲಿ ಭಾನುವಾರ ಸಂಜೆಯಿಂದ ದೋಷ ಕಾಣಿಸಿಕೊಂಡಿದ್ದು, ಸೋಮವಾರ ಸಂಜೆವರೆಗೂ ಸರಿಪಡಿಸಲು ಸಾಧ್ಯವಾಗಿಲ್ಲ.
ನೀರಿನ ಚಿಲುಮೆಗಳಿಗೆ ಸಂಗೀತ ಮತ್ತು ಬೆಳಕನ್ನು ಸಂಯೋಜಿಸುವ ಸಾಫ್ಟ್ವೇರ್ ಭಾನುವಾರ ಸಂಜೆ ದಿಢೀರ್ ಸ್ಥಗಿತಗೊಂಡಿದೆ. ತಜ್ಞರು ಸರಿಪಡಿಸುವ ಪ್ರಯತ್ನ ಮುಂದುವರಿಸಿದ್ದಾರೆ.
‘ಸಾಫ್ಟ್ವೇರ್ನ ದೋಷ ಸರಿಯಾಗುವವರೆಗೆ ಸಂಗೀತ ಮತ್ತು ನೃತ್ಯ ಕಾರಂಜಿಯ ಪ್ರದರ್ಶನ ಇರುವುದಿಲ್ಲ’ ಎಂದು ಟಿಕೆಟ್ ಕೌಂಟರ್ ಬಳಿ ಫಲಕ ಹಾಕಲಾಗಿದೆ. ಪ್ರವಾಸಿಗರು ಬೃಂದಾವನ ಉದ್ಯಾನ ವೀಕ್ಷಿಸಲು ಅವಕಾಶ ಇರುತ್ತದೆ’ ಎಂದು ಕಾವೇರಿ ನೀರಾವರಿ ನಿಗಮದ ಎಇಇ ಫಾರೂಕ್ ಅಬು ತಿಳಿಸಿದ್ದಾರೆ.
‘ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ಸಂಗೀತ ನೃತ್ಯ ಕಾರಂಜಿಯ ಘಟಕ ಮತ್ತು ಸಾಫ್ಟ್ವೇರ್ಗಳನ್ನು ನಿರ್ವಹಣೆ ಮಾಡಬೇಕು. ಅಂತಹ ಸಂದರ್ಭದಲ್ಲಿ ಪ್ರದರ್ಶನವನ್ನು ಅನಿವಾರ್ಯವಾಗಿ ನಿಲ್ಲಿಸಲಾಗುತ್ತದೆ. ಆದರೆ ಸೋಮವಾರ ದಿಢೀರ್ ಸ್ಥಗಿತಗೊಂಡಿದ್ದು, ಸರಿಪಡಿಸಿದ ಬಳಿಕ ಪ್ರದರ್ಶನ ಮತ್ತೆ ಆರಂಭವಾಗಲಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.