ADVERTISEMENT

ಮೈಸೂರು – ಬೆಂಗಳೂರು ಹೆದ್ದಾರಿ: ಟೋಲ್‌ ಉಳಿಸಲು ಹೋಗಿ ಜೀವ ತೆತ್ತರು

ಸಿದ್ದು ಆರ್.ಜಿ.ಹಳ್ಳಿ
Published 5 ಏಪ್ರಿಲ್ 2025, 6:50 IST
Last Updated 5 ಏಪ್ರಿಲ್ 2025, 6:50 IST
<div class="paragraphs"><p>ಮಂಡ್ಯ ತಾಲ್ಲೂಕಿನ ತೂಬಿನಕೆರೆ ಸಮೀಪ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು</p></div><div class="paragraphs"><p></p></div>

ಮಂಡ್ಯ ತಾಲ್ಲೂಕಿನ ತೂಬಿನಕೆರೆ ಸಮೀಪ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು

   

ಮಂಡ್ಯ: ಸೋದರ ಮಾವನ ಅಂತ್ಯಕ್ರಿಯೆಗೆ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರು ಸದಸ್ಯರ ಕುಟುಂಬವೊಂದು ಬೆಂಗಳೂರು–ಮೈಸೂರು ಹೆದ್ದಾರಿಯ (ಎನ್‌.ಎಚ್‌–275) ಟೋಲ್‌ ಉಳಿಸಲು ಹೋಗಿ, ಜೀವವನ್ನೇ ತೆತ್ತ ದಾರುಣ ಘಟನೆ ಗುರುವಾರ ನಡೆದಿದೆ.

ADVERTISEMENT

ಬೆಂಗಳೂರಿನ ಜೆ.ಪಿ. ನಗರದ ಸಹೋದರರಾದ ಸತ್ಯಾನಂದರಾಜೇ ಅರಸ್‌ ಮತ್ತು ಚಂದ್ರಶೇಖರ ರಾಜೇ ಅರಸ್‌ ದಂಪತಿಗಳು, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಸಿಗೂರು ಗ್ರಾಮಕ್ಕೆ ಅಂತ್ಯಕ್ರಿಯೆಗೆ ಹೋಗುತ್ತಿದ್ದರು. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರನ್ನು ಸರ್ವಿಸ್‌ ರಸ್ತೆ ಕಡೆ ದಿಢೀರ್‌ ತಿರುಗಿಸಲು ಬ್ರೇಕ್‌ ಒತ್ತಿದಾಗ ಹಿಂದಿನಿಂದ ಬರುತ್ತಿದ್ದ ಐರಾವತ ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಅಸುನೀಗಿದ್ದಾರೆ. 

ಮೈಸೂರು ನಗರದವರೆಗೆ ಹೆದ್ದಾರಿಯಲ್ಲಿಯೇ ಸಾಗಬೇಕಿದ್ದ ಕಾರು, 30 ಕಿ.ಮೀ. ಮುಂಚಿತವಾಗಿಯೇ ಮಂಡ್ಯ ತಾಲ್ಲೂಕಿನ ತೂಬಿನಕೆರೆ ಬಳಿ ಸರ್ವಿಸ್‌ ರಸ್ತೆ ಕಡೆ ತಿರುಗಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತದೆ. ಕಾರಣ 6 ಕಿ.ಮೀ. ದೂರದಲ್ಲಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್‌ ಪ್ಲಾಜಾದ ಶುಲ್ಕವನ್ನು ತಪ್ಪಿಸಲು ಬಹುಶಃ ಕಾರು ಸರ್ವಿಸ್‌ ರಸ್ತೆ ಕಡೆ ನುಗ್ಗಿದೆ ಎನ್ನುತ್ತಾರೆ ಪೊಲೀಸರು.   

ನಿರ್ಗಮನದ ಕಿರಿಕಿರಿ:

ಪಾಂಡವಪುರಕ್ಕೆ ಹೋಗುವವರಿಗೆ ಅನುಕೂಲವಾಗಲಿ ಎಂದು ತೂಬಿನಕೆರೆ ಬಳಿ ನಿರ್ಗಮನ ಮಾರ್ಗ ಕಲ್ಪಿಸಲಾಗಿದೆ. ಆದರೆ, ಬೆಂಗಳೂರಿನಿಂದ ಮೈಸೂರು ಕಡೆ ಹೋಗುವ ಬಹುತೇಕ ಕಾರುಗಳು ಗಣಂಗೂರು ಸಮೀಪದ ಟೋಲ್‌ ಪ್ಲಾಜಾದ ಶುಲ್ಕವನ್ನು ತಪ್ಪಿಸಲೆಂದೇ, ತೂಬಿನಕೆರೆ ಬಳಿಯೇ ಸರ್ವಿಸ್‌ ರಸ್ತೆಗೆ ದಿಢೀರನೇ ನುಗ್ಗುತ್ತವೆ. 

ಆರಂಭದಲ್ಲಿ ವಿಶಾಲವಾಗಿದ್ದ ನಿರ್ಗಮನದ ಮಾರ್ಗ ಈಗ ಅತ್ಯಂತ ಕಿರಿದಾಗಿದೆ. ಅಲ್ಲಿ ಇಟ್ಟಿರುವ ಕಬ್ಬಿಣದ ಬಾಗಿಲು ಒಂದು ಕಾರು ಹೋಗುವಷ್ಟು ಮಾತ್ರ ಸ್ಥಳಾವಕಾಶ ಹೊಂದಿದೆ. ಟ್ರಕ್‌ ಮತ್ತು ಬಸ್‌ಗಳಿಗೆ ಇಲ್ಲಿ ಪ್ರವೇಶವಿಲ್ಲದಂತಾಗಿದೆ. 

‘ಹೆದ್ದಾರಿಯಲ್ಲಿ ಶರವೇಗದಲ್ಲಿ ಹೋಗುವ ಕಾರುಗಳು ಗಕ್ಕನೆ ಸರ್ವಿಸ್‌ ರಸ್ತೆ ಕಡೆ ತಿರುಗಿದಾಗ ಹಿಂದಿನಿಂದ ಬರುವ ವಾಹನ ಚಾಲಕರು ತಬ್ಬಿಬ್ಬಾಗಿ ಅಪಘಾತಗಳು ಸಂಭವಿಸುತ್ತಿವೆ. ಕಿರಿದಾದ ನಿರ್ಗಮನ ಮಾರ್ಗದ ಪಕ್ಕ ಇಟ್ಟಿರುವ ದೊಡ್ಡ ಗಾತ್ರದ ಸಿಮೆಂಟ್‌ ತಡೆಗೋಡೆ ಅಪಾಯ ಆಹ್ವಾನಿಸುತ್ತಿದೆ’ ಎನ್ನುತ್ತಾರೆ ತೂಬಿನಕೆರೆಯ ಶ್ರೀಧರ್‌, ಚಂದ್ರು.  

ಸರ್ವಿಸ್‌ ರಸ್ತೆಯಲ್ಲಿ ವಾಹನ ದಟ್ಟಣೆ:

ಹೆದ್ದಾರಿಯಲ್ಲಿ ಸಾಗಬೇಕಾದ ಕಾರುಗಳು ಸರ್ವಿಸ್‌ ರಸ್ತೆಗೆ ಇಳಿಯುತ್ತಿರುವುದರಿಂದ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿರುವ ಕಾರಣದಿಂದಾಗಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಭಾರಿ ವಾಹನಗಳನ್ನು ತಡೆದು ನಿಲ್ಲಿಸುವ ಮೂಲಕ ತೂಬಿನಕೆರೆ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದ್ದರು.

ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಮುಚ್ಚಿರುವ ಕಾರಣ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವಕೀಲರು ಕೂಡ ಪ್ರತಿಭಟನೆ ನಡೆಸಿದ್ದರು. 

‘ಅಕ್ಕಪಕ್ಕದ ಹಳ್ಳಿಗರಿಗೆ ಸ್ಥಳೀಯ ಸಂಚಾರಕ್ಕಾಗಿ ಅನುಕೂಲವಾಗಲಿ ಎಂದು ನಿರ್ಮಿಸಿರುವ ಸರ್ವಿಸ್‌ ರಸ್ತೆಯಲ್ಲಿ ಕಾರು, ಜೀಪುಗಳ ಕಾರುಬಾರು ಜೋರಾಗಿದೆ. ಇದರಿಂದ ಕೃಷಿ ಚಟುವಟಿಕೆಗೆ ಬೈಕ್‌, ಟ್ರ್ಯಾಕ್ಟರ್‌ಗಳಲ್ಲಿ ಸಾಗುವ ಗ್ರಾಮಸ್ಥರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ’ ಎನ್ನುತ್ತಾರೆ ರಾಗಿಮುದ್ದನಹಳ್ಳಿ ಗ್ರಾಮಸ್ಥರಾದ ದಿವಾಕರ, ಸುನಿಲ್‌ಕುಮಾರ್‌ ಮತ್ತು ಪ್ರಕಾಶ್‌. 

ನಿರ್ಗಮನ ಮಾರ್ಗ ಅವೈಜ್ಞಾನಿಕವಾಗಿದೆ ಮತ್ತು ಸೂಚನಾ ಫಲಕ ಅಳವಡಿಸಿಲ್ಲದ ಕಾರಣ ಹೆದ್ದಾರಿ ಪ್ರಾಧಿಕಾರ ಮತ್ತು ಟೋಲ್‌ ನಿರ್ವಹಿಸುವ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಾಗಿದೆ .
ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ, ಮಂಡ್ಯ

ಮೈಸೂರು ಕಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಬರುವ ವಾಹನಗಳಿಗೆ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ ಸಮೀಪ ಹೆದ್ದಾರಿ ಪ್ರವೇಶಿಸುವ ಮಾರ್ಗವನ್ನು ನಿರ್ಬಂಧಿಸಲಾಗಿದೆ. ಪಾಂಡವಪುರಕ್ಕೆ ಹೋಗುವವರಿಗೆ ಅನುಕೂಲವಾಗಲಿ ಎಂದು ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಹೋಗಲು ಮಾತ್ರ ನಿರ್ಗಮನ ಮಾರ್ಗವನ್ನು ತೆರೆಯಲಾಗಿದೆ. ಗಣಂಗೂರು ಟೋಲ್‌ ಪ್ಲಾಜಾ ದಾಟುವವರೆಗೆ ಸರ್ವಿಸ್‌ ರಸ್ತೆಯಲ್ಲಿ ಬರುವ ಕಾರು ಮತ್ತು ಜೀಪುಗಳು, ರಾಗಿಮುದ್ದನಹಳ್ಳಿ ಬಳಿ ರಿವರ್ಸ್‌ ಗೇರ್‌ನಲ್ಲಿ ಬಂದು ಹೆದ್ದಾರಿ ಪ್ರವೇಶಿಸುತ್ತಿದ್ದವು. ಕಾರಣ ಬಿಡದಿವರೆಗೆ ಟೋಲ್‌ ಕಾಟವಿಲ್ಲದೆ ನಿರಾಳವಾಗಿ ಸಂಚರಿಸಬಹುದು ಎಂಬುದು ಚಾಲಕರ ಲೆಕ್ಕಾಚಾರ.

ಇದನ್ನು ಗುರುತಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು, ಸಿಬ್ಬಂದಿಯನ್ನು ನಿಯೋಜಿಸಿ, ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ. ಇದರಿಂದ ಮಂಡ್ಯ ತಾಲ್ಲೂಕಿನ ತೂಬಿನಕೆರೆವರೆಗೆ ಸರ್ವಿಸ್‌ ರಸ್ತೆಯಲ್ಲೇ ವಾಹನಗಳು ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಚಾಲಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.