ಮಂಡ್ಯ: ಭತ್ತದ ವಿವಿಧ ತಳಿ, ಕೃಷಿ ಪರಿಕರ ಸಂಗ್ರಹಿಸಿ ‘ಮ್ಯೂಸಿಯಂ ಮ್ಯಾನ್’ ಎಂದೇ ಪ್ರಖ್ಯಾತರಾಗಿರುವ ತಾಲ್ಲೂಕಿನ ಶಿವಳ್ಳಿ ಗ್ರಾಮದ ಭತ್ತದ ಬೋರೇಗೌಡ ಅವರ ಕಾರ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೆಚ್ಚುಗೆಗೆ ಪಾತ್ರರಾಗಿದೆ. ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ಸಂದೇಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಾಧ್ಯಮಗಳಲ್ಲಿ ಬಂದ ಭತ್ತದ ಬೋರೆಗೌಡರ ಸಾಧನೆಯನ್ನು ಗಮನಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತನ ಭಾವಚಿತ್ರ ಹಾಕಿ ಸಂದೇಶ ಪ್ರಕಟಿಸಿದ್ದರು. ‘ಭಾರತದ ಶ್ರೀಮಂತ ಕೃಷಿ ಪರಂಪರೆಗೆ ಸ್ವಯಂ ಪ್ರೇರಿತ ವ್ಯಕ್ತಿಯ ಕೊಡುಗೆ ಅನುಕರಣೀಯ’ ಎಂದು ಸಂದೇಶ ಹಾಕಿದ್ದರು. ‘ಸ್ಥಳೀಯ ಪ್ರಬೇಧಗಳ ಸಂರಕ್ಷಣೆಗೆ ನನ್ನ ಸಂಕಲ್ಪವಿದೆ’ ಎಂದು ಬೋರೇಗೌಡು ಹೇಳಿರುವುದನ್ನು ಪ್ರಸ್ತಾಪ ಮಾಡಿದ್ದರು.
ಬೋರೇಗೌಡತು ತಮ್ಮ ಮನೆಗೆ ಮ್ಯೂಸಿಯಂ ರೂಪ ಕೊಟ್ಟು ಸುಮಾರು 210ಕ್ಕೂ ಹೆಚ್ಚು ಸ್ಥಳೀಯ ಭತ್ತದ ತಳಿಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಕೃಷಿಗೆ ಬಳಸುತ್ತಿದ್ದ ಹಳೆಯ ಮರದ ನೇಗಿಲು, ಕುಡುಗೋಲು ಸೇರಿದಂತೆ ಹಲವು ಉಪಕರಣ ಸಂಗ್ರಹಿಸಿದ್ದಾರೆ.
‘ನಾಟಿ ತಳಿಯಲ್ಲಿ ಅತಿ ಹೆಚ್ಚು ಪೋಷಕಾಂಶಗಳಿವೆ. ಹೈಬ್ರೀಡ್ ತಳಿಗಳ ಫಸಲಿನಲ್ಲಿ ಇಳುವರಿ ಪ್ರಮಾಣ ಹೆಚ್ಚಿರುತ್ತದೆ, ಆದರೆ ಗುಣಮಟ್ಟ ಇರುವುದಿಲ್ಲ. ಈ ಕುರಿತು ರೈತರಲ್ಲಿ ಅರಿವು ಮೂಡಿಸುತ್ತಿದ್ದೇನೆ. ನಮ್ಮ ಸಂಗ್ರಹಾಲಯದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟರ್ನಲ್ಲಿ ಸಂದೇಶ ಪ್ರಕಟಿಸಿರುವುದು ಸಂತಸ ತಂದಿದೆ’ ಎಂದು ಶಿವಳ್ಳಿಯ ಭತ್ತದ ಬೋರೇಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.