ಶ್ರೀರಂಗಪಟ್ಟಣ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.
ಕೇಂದ್ರ ಪುರಾತತ್ವ ಇಲಾಖೆ ಆದೇಶದಂತೆ ಮೇ 15ರ ವರೆಗೆ ಭಕ್ತರಿಗೆ ಪ್ರವೇಶ ಇರುವುದಿಲ್ಲ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆಗಳು ವಾಡಿಕೆಯಂತೆ ನಡೆಯಲಿವೆ ಎಂದು ಅರ್ಚಕರು ಹೇಳಿದ್ದಾರೆ.
ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ (ಎಎಸ್ಐ) ಅಡಿಯಲ್ಲಿ ಬರುವ ಪಟ್ಟಣದಲ್ಲಿರುವ ಸ್ಮಾರಕಗಳಿಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಟಿಪ್ಪು ಬೇಸಿಗೆ ಅರಮನೆ, ಗುಂಬಸ್, ಕರ್ನಲ್ ಬೇಯ್ಲಿ ಡಂಜನ್, ಇನ್ಮಾನ್ಸ್ ಡಂಜನ್, ಟಿಪ್ಪು ಮಡಿದ ಸ್ಥಳ ಸೇರಿದಂತೆ 10 ಸ್ಮಾರಕಗಳಿದ್ದು, ಪ್ರವಾಸಿಗರ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ವ್ಯಾಪಿಸುತ್ತಿರುವ ಕಾರಣ ಗಂಜಾಂನ ಪ್ರಸಿದ್ಧ ನಿಮಿಷಾಂಬಾ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಪಟ್ಟಣದ ಗಂಗಾಧರೇಶ್ವರ, ಜ್ಯೋತಿರ್ಮಹೇಶ್ವರ ಇತರ ದೇವಾಲಯಗಳಲ್ಲಿ ಕೂಡ ಭಕ್ತರು ತೀರಾ ಕಡಿಮೆ ಕಂಡು ಬಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.