ಮದ್ದೂರು: ಅಂಗಡಿಗೆ ಚಹಾ ಕುಡಿಯಲು ಬಂದಿದ್ದ ಬೆಂಗಳೂರಿನ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ₹ 1 ಲಕ್ಷ ಹಣವಿದ್ದ ಬ್ಯಾಗನ್ನು ಅವರಿಗೆ ಹಿಂತಿರುಗಿಸಿ ಮದ್ದೂರು ಪಟ್ಟಣದ ಚಹಾ ವ್ಯಾಪಾರಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕಾರ್ಯನಿಮಿತ್ತ ಮದ್ದೂರಿಗೆ ಬಂದಿದ್ದ ಬೆಂಗಳೂರಿನ ವ್ಯಕ್ತಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಹಿಂದಿನ ರಸ್ತೆಯಲ್ಲಿರುವ, ಕುಂದಾಪುರ ಮೂಲದ ವಾಸು ಎಂಬುವವರ ಅಂಗಡಿಗೆ ತೆರಳಿದ್ದರು. ಅಲ್ಲಿ ಟೀ ಕುಡಿದು, ಜತೆಗಿದ್ದ ಬ್ಯಾಗನ್ನು ಟೇಬಲ್ ಮೇಲೆ ಇರಿಸಿ ತೆರಳಿದ್ದಾರೆ. ಬ್ಯಾಗ್ನಲ್ಲಿ ಹಣ ಇರುವುದನ್ನು ಕಂಡ ವಾಸು ಭದ್ರವಾಗಿ ಎತ್ತಿಟ್ಟಿದ್ದರು.
ಒಂದು ಗಂಟೆ ಬಳಿಕ ಗಾಬರಿಯಿಂದ ಬಂದ ವ್ಯಕ್ತಿ ಬ್ಯಾಗ್ ಬಗ್ಗೆ ವಿಚಾರಿಸಿದಾಗ ವಾಸು ಅದನ್ನು ಮರಳಿಸಿದರು. ವಾಸು ಅವರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದರು.
ಚಿಕ್ಕ ಅಂಗಡಿಯನ್ನು ಬಾಡಿಗೆಗೆ ಪಡೆದು ಚಹಾ ವ್ಯಾಪಾರ ಮಾಡುತ್ತಿದ್ದ ವಾಸು ಅವರ ಪ್ರಾಮಾಣಿಕತೆಗೆ ಗ್ರಾಹಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.