ADVERTISEMENT

ಉತ್ತಮ ಆರೋಗ್ಯ ಒದಗಿಸುವುದೇ ನಮ್ಮ ಧ್ಯೇಯ: ಡಾ.ಪಿ.ನರಸಿಂಹಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 13:49 IST
Last Updated 6 ಮಾರ್ಚ್ 2024, 13:49 IST
ಡಾ.ಪಿ.ನರಸಿಂಹಸ್ವಾಮಿ
ಡಾ.ಪಿ.ನರಸಿಂಹಸ್ವಾಮಿ   

ಮಂಡ್ಯ: ‘ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌)ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಹಂತಹಂತವಾಗಿ ಬಗೆಹರಿಸುವ ಮೂಲಕ ಎಲ್ಲ ವರ್ಗದ ಜನರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ನಮ್ಮ ಧ್ಯೇಯವಾಗಿದೆ’ ಎಂದು ಸಂಸ್ಥೆ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ತಿಳಿಸಿದರು.

‘ಇಲ್ಲಿರುವ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ತುಂಬಾ ಇದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.

‘21 ಪ್ರಾಧ್ಯಾಪಕರ ಹುದ್ದೆಗಳ ಪೈಕಿ 20 ಮಂದಿ ಸೇವೆ ಸಲ್ಲಿಸುತ್ತಿದ್ದು, ಒಂದು ಹುದ್ದೆ ಖಾಲಿ ಉಳಿದಿದೆ. ಸಹ ಪ್ರಾಧ್ಯಾಪಕರು 44 ಮಂದಿ ಇರಬೇಕಿದ್ದು, ಒಂದು ಹುದ್ದೆ ಖಾಲಿ ಇದೆ. 70 ಮಂದಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿದ್ದು, ಈ ಪೈಕಿ 40 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೀನಿಯರ್‌ ರೆಸಿಡೆಂಟ್ 66 ಹುದ್ದೆಗಳಿದ್ದು, ಕೇವಲ ಒಬ್ಬರಿದ್ದು, 65 ಹುದ್ದೆಗಳು ಖಾಲಿ ಉಳಿದಿವೆ. ಎಲ್‌ಎಂಒ 3 ಹುದ್ದೆಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಈ ಪೈಕಿ ಒಂದು ಹುದ್ದೆ ಖಾಲಿ ಇದೆ. ಜೂನಿಯರ್ ರೆಸಿಡೆಂಟ್ 84 ಮಂದಿಯ ಪೈಕಿ 80 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ಹುದ್ದೆಗಳು ಖಾಲಿ ಉಳಿದಿವೆ. ಇನ್ನು ಕ್ಲಿನಿಕ್ ವಿಭಾಗದಲ್ಲೂ ಸಾಕಷ್ಟು ವೈದ್ಯರ ಕೊರತೆ ಇದೆ’ ಎಂದು ವಿವರಿಸಿದರು.

ADVERTISEMENT

‘ದಾದಿಯರು, ತಂತ್ರಜ್ಞರು ಸೇರಿದಂತೆ ವಿವಿಧ ವಿಭಾಗಗಳಲ್ಲೂ ಸಾಕಷ್ಟು ಹುದ್ದೆಗಳ ಕೊರತೆ ಎದುರಾಗಿದೆ. ಇದರಿಂದಾಗಿ ನಾವು ರೋಗಿಗಳಿಗೆ ಸಮರ್ಪಕವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ಗೌರ್ನಿಂಗ್ ಕೌನ್ಸಿಲ್‌ನಲ್ಲೂ ಸಹ ಗಮನ ಸೆಳೆಯುವುದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ಕ್ಯಾನ್ಸರ್ ಆಸ್ಪತ್ರೆ ಕಟ್ಟಡಕ್ಕೆ ₹5.65 ಕೋಟಿ ಸಿವಿಲ್ ಕಾಮಗಾರಿಗಾಗಿ ಕೊರತೆ ಇತ್ತು. ಈಗ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಳಿಸಲಾಗುವುದು. ಯಂತ್ರೋಪಕರಣಗಳೂ ಸಹ ಆಸ್ಪತ್ರೆಗೆ ಬರಲಿದ್ದು, ಶೀಘ್ರ ಆಸ್ಪತ್ರೆ ಪ್ರಾರಂಭಿಸಲಾಗುವುದು. ಆದರೆ ಇಲ್ಲೂ ನಮಗೆ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಹೆಚ್ಚಿದೆ ಎಂದು ತಿಳಿಸಿದರು.

ಗ್ರಂಥಾಲಯ ಕೊಠಡಿಗೆ ₹3.5 ಕೋಟಿ ಅಗತ್ಯವಿದ್ದು, ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗಲಿದೆ. ಆಸ್ಪತ್ರೆ ಆವರಣದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ವಸತಿ ನಿಲಯದ ಯುಜಿಡಿ ವ್ಯವಸ್ಥೆ ಸರಿಪಡಿಸಲಾಗಿದೆ. ಹಂತ ಹಂತವಾಗಿ ಉಳಿದ ಎಲ್ಲವನ್ನೂ ದುರಸ್ಥಿಪಡಿಸಲಾಗುವುದು. ಕಟ್ಟಡದ ಅಂದ ಹದಗೆಟ್ಟಿದ್ದು, ಬಣ್ಣ ಬಳಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

‘ಬಹುಮುಖ್ಯವಾಗಿ ನಮಗೆ ಜಾಗದ ಕೊರತೆ ಇದ್ದು, ಪಕ್ಕದಲ್ಲಿರುವ ತಮಿಳು ಸ್ಲಂ ಜಾಗವನ್ನು ಆಸ್ಪತ್ರೆಗೆ ಹಸ್ತಾಂತರಿಸಿದರೆ, ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡು ಸೂಪರ್ ಸ್ಪೆಷಾಲಟಿ ಆಸ್ಪತ್ರೆ ನಿರ್ಮಾಣ ಮಾಡಿ ಉತ್ತಮ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.