ADVERTISEMENT

ಹಳ್ಳಿಕಾರ್‌ ಒಡೆಯ; ಸಂತೋಷ್‌ ವಿರುದ್ಧ ಕಾನೂನು ಕ್ರಮ- ಕಲ್ಲಹಳ್ಳಿ ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 14:03 IST
Last Updated 11 ಮಾರ್ಚ್ 2024, 14:03 IST
ವರ್ತೂರು ಸಂತೋಷ್
ವರ್ತೂರು ಸಂತೋಷ್   

ಮಂಡ್ಯ: ‘ವರ್ತೂರು ಸಂತೋಷ್‌ ಕುಮಾರ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ‘ಹಳ್ಳಿಕಾರ್ ಒಡೆಯ’ ಎಂದು ಬಿಂಬಿಸಿಕೊಂಡು ಸ್ವಾರ್ಥಕ್ಕಾಗಿ ಹಳ್ಳಿಕಾರ್ ಗೋತಳಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಈತನ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಹಳ್ಳಿಕಾರ್‌ ತಳಿ ಸಾಕಣೆದಾರರಾದ ಕಲ್ಲಹಳ್ಳಿ ರವಿಕುಮಾರ್ ಹೇಳಿದರು.

‘ಹಳ್ಳಿಕಾರ್, ಕಾಡುಗೊಲ್ಲ ಜನಾಂಗ ಅನಾದಿ ಕಾಲದಿಂದಲೂ ಪಾರಂಪಾರಿಕವಾಗಿ ಹಳ್ಳಿಕಾರ್ ಗೋತಳಿಯನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ವಿಜಯನಗರ ಅರಸರಾಗಿದ್ದ ಶ್ರೀಕೃಷ್ಣದೇವರಾಯರು ಹಳ್ಳಿಕಾರ್‌ ತಳಿ ಪೋಷಣೆ ಮಾಡಿದ್ದರು. ಮೈಸೂರು ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ್‌ ಅವರು ಹಳ್ಳಿಕಾರ್‌ ತಳಿ ರಕ್ಷಣೆಗಾಗಿಯೇ ಕಾವಲು ಪ್ರದೇಶ ಮೀಸಲಿಟ್ಟಿದ್ದರು. ಆದರೆ ವರ್ತೂರ್‌ ಸಂತೋಷ್‌ ಹಳ್ಳಿಕಾರ್‌ ಒಡೆಯ ಎಂದು ಕರೆದುಕೊಂಡು ಗೋವುಗಳಿಗೆ ಅವಮಾನ ಮಾಡುತ್ತಿದ್ದಾನೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ವರ್ತೂರು ಸಂತೋಷ್‌ ‘ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿ ಅಧ್ಯಕ್ಷ’ ಎಂದು ಬಿಂಬಿಸಿಕೊಂಡಿದ್ದಾನೆ. ಆತನಿಗೆ ಹಳ್ಳಿಕಾರ್ ಗೋತಳಿಯ ಇತಿಹಾಸದ ಅರಿವಿಲ್ಲ. ಇತಿಹಾಸವನ್ನು ತಿರುಚುವಂತಹ ಪ್ರಯತ್ನ ಮಾಡುತ್ತಿದ್ದಾನೆ. ಯಾರಾದರೂ ಪ್ರಶ್ನೆ ಮಾಡಿದರೆ ಉದ್ಧಟತನದಿಂದ ಮಾತನಾಡುತ್ತಾನೆ. ಹೀಗಾಗಿ ಅವನ ವಿರುದ್ಧ ಸದ್ಯ ವಕೀಲರ ಮೂಲಕ ನೋಟಿಸ್‌ ನೀಡಲಾಗಿದೆ. ಮುಂದೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ಹೋರಾಟ ನಡೆಸಲಾಗುವುದು’ ಎಂದರು.

ADVERTISEMENT

ಕಿರಣ್ ಪಟೇಲ್, ಪ್ರಜ್ವಲ್, ದೀಕ್ಷಿತ್, ಪ್ರಶಾಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.