ADVERTISEMENT

3 ವರ್ಷದ ಬಾಲಕಿ ಸೃಜನಿಯ ಅಮೂರ್ತ ಚಿತ್ರಕಲಾ ಪ್ರದರ್ಶನ

ಮೂರು ವರ್ಷದ ಪೋರಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 14:05 IST
Last Updated 11 ಮಾರ್ಚ್ 2020, 14:05 IST
ನಗರದ ‘ಪುಟ್ಟಹೆಜ್ಜೆ’ ನಿವಾಸದಲ್ಲಿ ಹಮ್ಮಿಕೊಂಡಿರುವ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಎಸ್‌.ಯು.ಸೃಜನಿಯ ಚಿತ್ರಕಲೆಯನ್ನು ಅತಿಥಿಗಳು ವೀಕ್ಷಿಸಿದರು
ನಗರದ ‘ಪುಟ್ಟಹೆಜ್ಜೆ’ ನಿವಾಸದಲ್ಲಿ ಹಮ್ಮಿಕೊಂಡಿರುವ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಎಸ್‌.ಯು.ಸೃಜನಿಯ ಚಿತ್ರಕಲೆಯನ್ನು ಅತಿಥಿಗಳು ವೀಕ್ಷಿಸಿದರು   

ಮಂಡ್ಯ: ಆಕೆ ಮೂರು ವರ್ಷದ ಪುಟ್ಟ ಪೋರಿ. ಎಲ್ಲ ಮಕ್ಕಳು ಆಟವಾಡುವುದರಲ್ಲೇ ಸಮಯ ಕಳೆದರೆ, ಆಕೆ ತನ್ನ ಮನಸ್ಸಿನಲ್ಲಿ ಮೂಡಿದ ಕಲ್ಪನೆಗಳಿಗೆ ಕುಂಚದ ಮೂಲಕ ಅಮೂರ್ತ ರೂಪ ನೀಡಿದ್ದಾಳೆ. ನೂರಾರು ಕಲಾಕೃತಿಗಳು ಆಕೆಯ ಕುಂಚದಿಂದ ಅರಳಿವೆ.

ಆ ಪುಟ್ಟ ಪೋರಿ ಎಸ್‌.ವಿ.ಸೃಜನಿ. ಈಕೆ ರಚಿಸಿದ ಕಲಾಕೃತಿಗಳ ‘ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ವನ್ನು ಚಿಗುರು ಚಿತ್ತಾರ ವತಿಯಿಂದ ಇಲ್ಲಿನ ವಿ.ವಿ. ನಗರದ ‌‘ಪುಟ್ಟಹೆಜ್ಜೆ’ ನಿವಾಸದಲ್ಲಿ ಆಯೋಜಿಸಲಾಗಿದೆ.

ನೂರಕ್ಕೂ ಹೆಚ್ಚು ಬಣ್ಣಬಣ್ಣದ ಅಮೂರ್ತ ಚಿತ್ರಗಳು ಸೃಜನಿಯ ಮನಸ್ಸಿನಲ್ಲಿನ ಭಾವನೆಯ ಪ್ರತೀಕವಾಗಿ ಹೊರಹೊಮ್ಮಿವೆ. ಒಂದೊಂದು ರೇಖೆಯು ಒಂದೊಂದು ಚಿತ್ರಣವನ್ನು ಕಟ್ಟಿಕೊಟ್ಟಿದ್ದು, ಪ್ರತಿಭೆಗೆ ವಯಸ್ಸಿನ ಅಂತರವಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.

ADVERTISEMENT

ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಅಧಿಕಾರಿ ಬಿಂದು ಮಾಧವ ವಡವಿ, ‘ಬಾಲಕಿ ಸೃಜನಿ ಗೀಚಿದ ಗೆರೆಗಳಲ್ಲಿ ನಿಗೂಢತೆ ಅಡಗಿದೆ. ಅರ್ಥವಿಲ್ಲದೆ, ಸುಮ್ಮನೆ ಬರೆದ ಚಿತ್ರಗಳಲ್ಲಿ ಒಂದು ಬಗೆಯ ಪರಿಪೂರ್ಣತೆ ಕಾಣಿಸುತ್ತಿದೆ. ನಾವು ಅದರಲ್ಲಿನ ಅರ್ಥವನ್ನು ಕಂಡು ಕೊಳ್ಳಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಮಗುವಿನ ಕಲ್ಪನೆ ಚಿತ್ರದ ಮೂಲಕ ಮುದ್ದಾಗಿ ವ್ಯಕ್ತವಾಗಿದೆ. ಚಿತ್ರಗಳನ್ನು ಗಮನಿಸಿದರೆ ಹಲವು ಅರ್ಥಗಳು ವ್ಯಕ್ತವಾಗುತ್ತವೆ. ತಂದೆ ಎಂ.ಎಲ್‌.ಸೋಮವರದ ಅವರು ಮಗಳ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದಾರೆ ಎಂದು ಭಾವಿಸಿದ್ದೆ. ನಿಜವಾಗಿಯೂ ಆಕೆಯಲ್ಲಿ ಅಗಾಧ ಪ್ರತಿಭೆ ಇದ್ದು, ಪ್ರೋತ್ಸಾಹಿಸುವ ಮೂಲಕ ನಿಜವಾದ ಅರ್ಥ ಕಂಡು ಕೊಳ್ಳುವಂತೆ ಮಾಡಬೇಕು’ ಎಂದು ಹೇಳಿದರು.

ಲೇಖಕ ಕಗ್ಗರೆ ಪ್ರಕಾಶ್‌ ಮಾತನಾಡಿ, ‌‘ಭೂರಮೆ ವಿಲಾಸ ಕವನ ಸಂಕಲನದ ಮುಖಪುಟಕ್ಕೆ ಸೃಜನಿ ಬಿಡಿಸಿದ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದರಲ್ಲಿನ 35ಕ್ಕೂ ಹೆಚ್ಚು ಕವಿತೆಗಳಿಗೆ ಆಕೆಯ ಚಿತ್ರಗಳನ್ನು ಬಳಸಿಕೊಂಡಿದ್ದು, ಪುಸ್ತಕ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರಗಳು ಕವನಗಳಿಗೆ ತುಂಬಾ ಹೊಂದಿಕೆಯಾಗಿದ್ದು, ಪದ್ಯಗಳನ್ನು ಓದಿ ಚಿತ್ರ ಬರೆದಿರುವ ಅನುಭವ ನೀಡುತ್ತವೆ’ ಎಂದು ಬಣ್ಣಿಸಿದರು.

ಕಲಾವಿದ ಎಲ್‌.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾವಿದ ಬಿ.ಸಿ.ದೇವರಾಜ್‌, ಬಾಲಕಿಯ ತಂದೆ ಎಂ.ಎಲ್‌.ಸೋಮವರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.