ADVERTISEMENT

ಪರಿಶಿಷ್ಠರ ಮೇಲೆ ದೌರ್ಜನ್ಯ ತಡೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 3:22 IST
Last Updated 20 ಸೆಪ್ಟೆಂಬರ್ 2025, 3:22 IST
ಪಾಂಡವಪುರ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಅಧ್ಯಕ್ಷತೆಯಲ್ಲಿ ಎಸ್‌ಸಿ/ಎಸ್‌ಟಿ ಹಿತಾರಕ್ಷಣಾ ಸಮಿತಿ ಸಭೆ ನಡೆಯಿತು.
ಪಾಂಡವಪುರ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಅಧ್ಯಕ್ಷತೆಯಲ್ಲಿ ಎಸ್‌ಸಿ/ಎಸ್‌ಟಿ ಹಿತಾರಕ್ಷಣಾ ಸಮಿತಿ ಸಭೆ ನಡೆಯಿತು.   

ಪಾಂಡವಪುರ: ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಿ ಎಲ್ಲ ಮುಂಜಾಗೃತಾ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟಜಾತಿ ಮ‌ತ್ತು ಪರಿಶಿಷ್ಟ ಪಂಗಡಗಳ ತಾಲ್ಲೂಕು ಮಟ್ಟದ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟರಿಗೆ ದೊರೆಯುವ ಸೌಲಭ್ಯಗಳನ್ನು ತಪ್ಪದೇ ತಲುಪುವಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕಿದೆ. ಸೌಲಭ್ಯಗಳಿಂದ ವಂಚಿತರಾಗಬಾರದು. ಜತೆಗೆ ಪರಿಶಿಷ್ಟರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಆಗಾಗ್ಗೆ ಮಾಹಿತಿ ನೀಡಬೇಕು ಎಂದು ಖಡಕ್ ಸೂಚನೆ ನೀಡಿದರು.

ADVERTISEMENT

ಅನುಪಾಲನ ವರದಿ: ಹಿತರಕ್ಷಣಾ ಸಮಿತಿ ಈ ಹಿಂದಿನ ಸಭೆಯ ನಡವಳಿಗಳ ಅನುಪಾಲ ವರದಿ ಬಗ್ಗೆ ಚರ್ಚಿಸಲಾಯಿತು. ಸಮಿತಿ ಸದಸ್ಯರಾದ ಅರಳಕುಪ್ಪೆ ದೇವರಾಜು ಅವರು ತಮ್ಮ ಸ್ವಗ್ರಾಮ ಅರಳಕುಪ್ಪೆ ಗ್ರಾಮದ ಸಮಸ್ಯೆಗಳನ್ನು ಹಾಗೂ ಇಳ್ಳೇನಹಳ್ಳಿ ದೇವರಾಜು ಅವರು ತಮ್ಮ ಸ್ವಗ್ರಾಮ ಇಳ್ಳೇನಹಳ್ಳಿ ಮತ್ತು ಗ್ರಾಮ ಪಕ್ಕದ ಕೆ.ಮಂಚನಹಳ್ಳಿ, ಮೊಳ್ಳೇನಹಳ್ಳಿ ಗ್ರಾಮಗಳ ಸಮಸ್ಯೆಗಳನಷ್ಟೇ ಪ್ರಸ್ತಾಪಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

ಮುಖಂಡರನ್ನು ಆಹ್ವಾನಿಸಲು ಸಲಹೆ: ಹಿತರಕ್ಷಣಾ ಸಮಿತಿಯಲ್ಲಿರುವ ಇಬ್ಬರು ಸದಸ್ಯರು ದಲಿತ ಸಮುದಾಯದ ಸಮಗ್ರ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ದಲಿತ ಸಂಘಟನೆಗಳ ಮುಖಂಡರನ್ನೂ ಸಭೆಗೆ ಆಹ್ವಾನಿಸಿ ಚರ್ಚೆಯಲ್ಲಿ ಭಾಗವಸುವಂತೆ ಕ್ರಮವಹಿಸಬೇಕು. ನಾಗಮಂಗಲ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ದಲಿತ ಸಂಘಟನೆಯ ಮುಖಂಡರನ್ನು ಆಹ್ವಾನಿಸಲಾಗುತ್ತಿದೆ ಎಂದು ಪತ್ರಕರ್ತ ಚಿಕ್ಕಾಡೆ ಮದನ್ ಕುಮಾರ್ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ನಿರ್ದೇಶನ ಪಡೆದು ಕ್ರಮವಹಿಸಲಾಗುವುದು ಎಂದು ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಸಭೆಗೆ ತಿಳಿಸಿದರು. ತಾ.ಪಂ.ಇಒ ವೀಣಾ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕಿ ಕೋಮಲ, ಪೊಲೀಸ್ ಇನ್ಸ್‌ಪೆಕ್ಟರ್ ಶರತ್ ಕುಮಾರ್, ಸಮಿತಿ ಸದಸ್ಯರಾದ ಅರಳಕುಪ್ಪೆ ದೇವರಾಜು, ಇಳ್ಳೇನಹಳ್ಳಿ ದೇವರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.