ಪಾಂಡವಪುರ: ಕೇವಲ 14 ಗುಂಟೆ ಜಮೀನಿನಲ್ಲಿ 35 ವಿಧದ 200ರಷ್ಟು ತೋಟಗಾರಿಕೆಯ ಗಿಡ,ಮರ ನೆಟ್ಟು ಬೆಳೆಸಿ ಯಶಸ್ಸು ಕಂಡಿರುವ ಸಾವಯವ ಕೃಷಿಕ ನಾಗೇಶ್ ರಾಗಿಮುದ್ದನಹಳ್ಳಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ರಾಗಿಮುದ್ದನಹಳ್ಳಿ ಗ್ರಾಮದ ಬಳಿ ಇರುವ ತನ್ನ ಹದಿನಾಲ್ಕು ಗುಂಟೆ ಜಮೀನಿನಲ್ಲಿ ನಾಗೇಶ್ 35 ವಿವಿಧ ತೋಟಗಾರಿಕೆಯ ಬೆಳೆಗಳ ಜೊತೆಗೆ ಇಂಗುಗುಂಡಿ, ಎರೆಹುಳುವಿನ ತೊಟ್ಟಿ, ಬೋರ್ವೆಲ್, ಕೋಳಿ ಸಾಕಣೆ ಜೊತೆಯಲ್ಲೆ ಅಲ್ಲೊಂದು ಪುಟ್ಟ ಮನೆ ಹೊಂದಿದ್ದಾರೆ.
ಕೊರೋನಾ ಚಡಪಡಿಕೆ: 2020ರಲ್ಲಿ ಕೊರೊನಾ(ಕೋವಿಡ್–19) ಆರ್ಭಟಕ್ಕೆ ತತ್ತರಿಸಿದ ಜನ ಊರು ಮನೆ ಸೇರಿದ್ದರು. ನಾಗೇಶ್ ಅವರಿಗೆ ಸುಮ್ಮನೆ ಮನೆಯಲ್ಲಿ ಕೂರುವುದು ಹೇಗೆ ಎಂದು ಚಡಪಡಿಕೆ ಶುರುವಾಯಿತು. ತನ್ನ 14 ಗುಂಟೆ ಜಮೀನಿನಲ್ಲಿ ಮಳೆ ಬಿದ್ದಾಗ ರಾಗಿ, ಜೋಳ ಮಾತ್ರ ಬೆಳೆಯಲಾಗುತ್ತಿತ್ತು. ಹಾಗಾಗಿ ಒಂದು ಬೋರ್ವೆಲ್ ಕೊರೆಯಿಸಲಾಯಿತು. 580 ಅಡಿ ಕೊರೆದರೂ ನೀರು ಬರಲಿಲ್ಲ. ಆದರೆ ಧೃತಿಗೆಡದ ಅವರು, ಬೋರ್ವೆಲ್ ಸುತ್ತ ಇಂಗು ಗುಂಡಿ ನಿರ್ಮಿಸಿದರು. ಮಳೆ ಬಿದ್ದಾಗ ಜಮೀನು ಮತ್ತು ತಮ್ಮ ಮನೆಯ ಮೇಲಿಂದ ಹರಿದು ಬಂದ ನೀರು ಇಂಗುಗುಂಡಿಗೆ ಬಿದ್ದು, ಬೋರ್ವೆಲ್ ರಿಚಾರ್ಜ್ ಆಗತೊಡಗಿ ಬೋರ್ವೆಲ್ನಲ್ಲಿ ನೀರು ತುಂಬಿತು!.
ಜಮೀನಿನ ಸುತ್ತ ಮುಳ್ಳಿನ ಬೇಲಿ ನಿರ್ಮಿಸಿದರು. ಮೊದಲು 104 ಅಡಿಕೆ ಗಿಡ, 12 ಬಳೆ ಗಿಡ, 15 ತೆಂಗಿನ ಗಿಡ ನೆಟ್ಟು ಹನಿ ನೀರಾವರಿ ಅಳವಡಿಸಿದರು. ಬಳಿಕ 4 ಏಲಕ್ಕಿ, 3 ಕರಿಮೆಣಸು, 2 ನಿಂಬೆ ಬೆಳೆ, ತಲಾ ಒಂದರಂತೆ ರಾಮಫಲ, ಲಕ್ಷ್ಮಣ ಫಲ, ಹನುಮ ಫಲ, ಸೀತಾಫಲ, ಹಿರಳೇಕಾಯಿ, ಮಾವು, ಡ್ರಾಗನ್ ಫ್ರೂಟ್, ಫಲಾವ್ ಏಲೆ, ಕರಿಬೇವು, ನುಗ್ಗೆ, ಚಿಕ್ಕೆ, ಲವಂಗ, ದಾಳಿಂಬೆ, ಸೇಬು, ಕಿತ್ತಳೆ, ನೋನಿ, ಬಾದಾಮಿ, ಕಿವಿ ಫ್ರೂಟ್, ನೆಲ್ಲಿಕಾಯಿ, ಜಾಯ್ ಕಾಯಿ, 2 ನಿಂಬೆ, 3 ಕಾಫಿ, 2 ಬಟರ್ ಫ್ರೂಟ್, 2 ಸೀಬೆ, 3 ಪರಂಗಿ, 3 ವೀಳ್ಯೆದೆಲೆ, 2 ಅಮೃತ ಬಳ್ಳಿ, 10 ಕನಕಾಂಬರಿ, 5 ಗುಲಾಬಿ, 4 ದಾಸವಾಳ ಗಿಡಗಳನ್ನು ನೆಟ್ಟು ಇವೆಲ್ಲಕ್ಕೂ ಹನಿ ನೀರಾವರಿ ವ್ಯವಸ್ಥೆ ಮಾಡಿದರು.
ಎರೆಹುಳು–ಎರೆಗೊಬ್ಬರ: ಎಲ್ಲ ಸಸಿ ಮತ್ತು ಗಿಡಗಳಿಗೂ ಸಾವಯವ ಗೊಬ್ಬರವನ್ನೇ ಬಳಸಿಕೊಂಡ ಬಂದ ನಾಗೇಶ್, ಒಂದಿಷ್ಟು ಎರೆಹುಳು ತಂದು ಮಣ್ಣಿಗೆ ಬಿಟ್ಟರು. ಎರೆಹುಳುಗಳು ಎರೆಗೊಬ್ಬರವನ್ನು ಕೊಡುತ್ತಾ ಬರುತ್ತಿವೆ. ಭೂಮಿ ಫಲವತ್ತಾಗುವುದರ ಜೊತೆಗೆ ಎರೆಗೊಬ್ಬರವು ಮಣ್ಣಿಗೆ ಸೇರಿಕೊಂಡು ಬೆಳೆಗಳು ಫಲವತ್ತಾಗಿ ಬೆಳೆಯಲು ಸಾಧ್ಯವಾಯಿತು. 5 ವರ್ಷಗಳಿಂದ ಒಂದು ಹಿಡಿ ರಸಗೊಬ್ಬರವನ್ನೂ ಬಳಸಿಲ್ಲ.
ಜೀವಾಮೃತ: ನೀರು, ಸಗಣಿ, ಗಂಜಲ, ದ್ವಿದಳ ಧಾನ್ಯ, ಬೆಲ್ಲಗಳಿಂದ ತಯಾರಿಸಿದ ಜೀವಾಮೃತವನ್ನು ಬೆಳೆಗಳ ಬೆಳವಣಿಗೆಗೆ ಹಾಕುವುದರ ಜೊತೆಗೆ ಡಿಕಾಂಪೋಸರ್ ವೇಸ್ಟ್, ಬೆಲ್ಲ ಮತ್ತು ನೀರಿನಿಂದ ತಯಾರಿಸಿದ ಔಷಧಿಯನ್ನು ಬೆಳೆಗಳಿಗೆ ಸಿಂಪಡಿಸಿ ರೋಗ ಬಾರದಂತೆ ನೋಡಿಕೊಳ್ಳುತ್ತಾರೆ . ಈ ಜಮೀನನಲ್ಲೆ ಒಂದು ಪುಟ್ಟದಾದ ಮನೆ ಮಾಡಿಕೊಂಡಿದ್ದಾರೆ ಮನೆಯಲ್ಲಿ ವಾಸಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಾಗೇಶ್ ಮಾಡಿಕೊಂಡಿದ್ದಾರೆ.
ನಾಟಿ ಕೋಳಿ, ಜೇನು ಸಾಕಣೆ: ನಾಗೇಶ್ 50 ನಾಟಿಕೋಳಿಗಳನ್ನು ಸಾಕಿದ್ದಾರೆ. ಕೋಳಿಗೊಬ್ಬರವು ಬೆಳೆಗಳಿಗೆ ಅನುಕೂಲವಾಗಿವೆ. ಜಮೀನಿನಲ್ಲಿ ಒಂದು ಪೆಟ್ಟಿಗೆ ಇಟ್ಟು ಜೇನು ಸಾಕಾಣಿಕೆಗೂ ನಾಗೇಶ್ ಪ್ರಯತ್ನಿಸುತ್ತಿದ್ದಾರೆ.
ಸಹಾಯಧನ: ನಾಗೇಶ್ ಜಮೀನಿಗೆ ಅಳವಡಿಸಿಕೊಂಡಿರುವ ಇಂಗುಗುಂಡಿ, ಬೋರ್ವೆಲ್ ರಿಚಾರ್ಜ್, ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ಸರ್ಕಾರದ ಸಹಾಯ ಧನವನ್ನು ಬಳಸಿಕೊಂಡಿದ್ದಾರೆ. ಈಗ ಮೇಕೆ ಸಾಕಾಣಿಕೆಗಾಗಿ ಶೆಡ್ ನಿರ್ಮಿಸಲು ಸರ್ಕಾರ ನೀಡುವ ಸಹಾಯಧನ ಬಳಸಿಕೊಳ್ಳುತ್ತಿದ್ದಾರೆ.
ರೈತರು ಹತ್ತಾರು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಆದಾಯ ಕಾಣದೆ ಸಾಲದಲ್ಲಿ ಮುಳುಗಿ ನಷ್ಟ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಪ್ರಗತಿಪರ ರೈತ ನಾಗೇಶ್ 14 ಗುಂಟೆ ಜಮೀನಿನಲ್ಲಿ ತೋಟಮಾಡಿ ಒಂದಿಷ್ಟು ಆದಾಯ ಕಾಣುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯೇ ಸರಿ.
‘ಈಗ ನನ್ನ ಪುಟ್ಟ ತೋಟದಿಂದ ವರ್ಷಕ್ಕೆ ಸುಮಾರು ₹1.50 ಲಕ್ಷ ಆದಾಯ ಪಡೆಯುತ್ತಿದ್ದೇನೆ. ಮುಂದೆ ನಾಲ್ಕು ಮೇಕೆ ಹಾಗೂ ದೇಸಿಯ ತಳಿ ಮಲೆನಾಡು ಗಿಡ್ಡ ಹಸು ಸಾಕುವ ಪ್ರಯತ್ನ ಮಾಡುತ್ತಿದ್ದೇನೆ. ಇವೆಲ್ಲವುಗಳಿಂದ ಮತ್ತಷ್ಟು ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಆದಾಯಕ್ಕಿಂತ ನನಗೆ ತುಂಬ ಕೃಷಿ ಖುಷಿ ಎನಿಸುತ್ತದೆ. ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತೇನೆ’ ಎಂದು ರೈತ ನಾಗೇಶ್ ರಾಗಿಮುದ್ದನಹಳ್ಳಿ(ಮೊ: 9972966390) ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.