ADVERTISEMENT

ಯುಗಾದಿ ವರ್ಷದ ತೊಡಕು: ಮಂಡ್ಯದಲ್ಲಿ ಮಾಂಸಕ್ಕಾಗಿ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 13:58 IST
Last Updated 3 ಏಪ್ರಿಲ್ 2022, 13:58 IST
ಯುಗಾದಿ ವರ್ಷದ ತೊಡಕು ಅಂಗವಾಗಿ ಚಿಕ್ಕಮಂಡ್ಯದ ಮಾಂಸ ಅಂಗಡಿ ಮುಂದೆ ಭಾನುವಾರ ಬೆಳಿಗ್ಗೆಯೇ ಜನರು ಸಾಲುಗಟ್ಟಿ ನಿಂತಿದ್ದರು
ಯುಗಾದಿ ವರ್ಷದ ತೊಡಕು ಅಂಗವಾಗಿ ಚಿಕ್ಕಮಂಡ್ಯದ ಮಾಂಸ ಅಂಗಡಿ ಮುಂದೆ ಭಾನುವಾರ ಬೆಳಿಗ್ಗೆಯೇ ಜನರು ಸಾಲುಗಟ್ಟಿ ನಿಂತಿದ್ದರು   

ಮಂಡ್ಯ: ಯುಗಾದಿ ‘ವರ್ಷದ ತೊಡಕು’ ಅಂಗವಾಗಿ ಭಾನುವಾರ ಜಿಲ್ಲೆಯಾದ್ಯಂತ ಜನರು ಮಾಂಸಕ್ಕಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ‘ಗುಡ್ಡೆ ಮಾಂಸ’ವನ್ನು ಮುಗಿಬಿದ್ದು ಖರೀದಿ ಮಾಡಿದರು.

ಉತ್ತಮ ಗುಣಮಟ್ಟದ ಮಾಂಸಕ್ಕೆ ಪ್ರಸಿದ್ಧಿ ಪಡೆದಿರುವ ಚಿಕ್ಕಮಂಡ್ಯ, ಸಾತನೂರು ಗ್ರಾಮಗಳ ಅಂಗಡಿಗಳ ಮುಂದೆ ಜನರು ನಸುಕಿನಿಂದಲೇ ಸಾಲುಗಟ್ಟಿ ನಿಂತಿದ್ದರು. ಜೊತೆಗೆ ಯಲಿಯೂರು ಸರ್ಕಲ್‌, ಉಮ್ಮಡಹಳ್ಳಿ ಗೇಟ್‌, ಕಾಳೇನಹಳ್ಳಯಲ್ಲೂ ಸಾವಿರಾರು ಜನರು ಮಾಂಸ ಖರೀದಿ ಮಾಡಿದರು.

ಗುಡ್ಡೆ ಮಾಂಸ ಖರೀದಿಗೂ ಜನರು ಸಾಲುಗಟ್ಟಿ ನಿಂತಿದ್ದರು. ಹಲವು ಮರಿಗಳನ್ನು ಕಡಿದು ಒಟ್ಟಾರೆ ಗುಡ್ಡೆಯಲ್ಲಿ ವಿಂಗಡಿಸಿ ಹಂಚಿಕೊಳ್ಳುವ ವಿಧಾನಕ್ಕೆ ಗುಡ್ಡೆ ಮಾಂಸ ಎಂದು ಪ್ರಸಿದ್ಧಿ ಪಡೆದಿದೆ. ಇದು ನಗರದ ಹೊಸಹಳ್ಳಿ, ಹಾಲಹಳ್ಳಿ, ಕಾವೇರಿ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಾರಾಟವಾಯಿತು.

ADVERTISEMENT

ಹಿಂದೂಗಳು ಹಲಾಲ್‌ ರೀತಿಯಲ್ಲಿ ಕತ್ತರಿಸಿದ ಮಾಂಸವನ್ನು ಖರೀದಿ ಮಾಡಬಾರದು ಎಂದು ಭಜರಂಗದಳ ಕಾರ್ಯಕರ್ತರು ಪ್ರಚಾರ ಮಾಡಿದ್ದರು. ಆದರೆ ಜನರು ಅದರ ಕಡೆ ಗಮನ ಕೊಡದೆ ಪ್ರತಿ ವರ್ಷದಂತೆ ತಮ್ಮಿಷ್ಟದ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಿದರು.

‘ಯಾವ ರೀತಿಯಲ್ಲಿ ಕತ್ತರಿಸಿದ್ದಾರೆ ಎಂಬುದು ನಮಗೆ ಮುಖ್ಯವಲ್ಲ. ಉತ್ತಮ ಗುಣಮಟ್ಟದ ನಾಟಿ ಮಾಂಸಕ್ಕಾಗಿ ಖರೀದಿಗಾಗಿ ನಾವು ಚಿಕ್ಕಮಂಡ್ಯಕ್ಕೆ ಬಂದಿದ್ದೇವೆ. ನಮಗೆ ಹಲಾಲ್‌ ಕಟ್‌, ಜಟ್ಕಾ ಕಟ್‌ ಗಳು ಗೊತ್ತಿಲ್ಲ’ ಎಂದು ಮಾಂಸ ಖರೀದಿ ಮಾಡುತ್ತಿದ್ದ ಎಸ್‌.ಸತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.