ಮಂಡ್ಯ: ‘ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ ಭಾಗಿಯಾಗಿರುವುದು ನಿಶ್ಚಿತ. ಬಿಜೆಪಿ ಸರ್ಕಾರ ಆತನನ್ನು ಬಂಧಿಸುವ ಧಮ್ ತೋರಿಸಬೇಕು’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಮೀರ್ ಅಹಮದ್ ಚುನಾವಣಾ ಪ್ರಚಾರಕ್ಕೆ ಚಿತ್ರನಟರನ್ನು ಕರೆಸುತ್ತಾರೆ. ಡ್ರಗ್ಸ್ ಜಾಲದಲ್ಲಿ ಅವರು ಮೊದಲಿನಿಂದಲೂ ಇದ್ದಾರೆ. ಬಂಧನ ಮಾಡಲು ಇದೊಂದು ಒಳ್ಳೆಯ ಅವಕಾಶವಾಗಿದೆ. ಪಾದರಾಯನಪುರ, ಡಿ.ಜೆ.ಹಳ್ಳಿಯಲ್ಲಿ ನಡೆದ ಪ್ರಕರಣಕ್ಕೂ ಡ್ರಗ್ಸ್ ಕಾರಣವಾಗಿದೆ. ಇದರ ಹಿಂದೆ ದಾವೂದ್ ಇಬ್ರಾಹಿಂ ಇದ್ದಾನೆ’ ಎಂದು ಆರೋಪಿಸಿದರು.
‘ರಾಜಕೀಯ ವ್ಯವಹಾರದಿಂದಾಗಿ ಜಮೀರ್ ಅಹಮದ್ ಬಂಧನ ಸಾಧ್ಯವಾಗುತ್ತಿಲ್ಲ. ಪ್ರಕರಣವನ್ನು ಸಿಸಿಬಿ ಸಮಗ್ರವಾಗಿ ತನಿಖೆ ಮಾಡುತ್ತದೆ ಎಂಬ ವಿಶ್ವಾಸ ಇಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ. ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ರಾಜ್ಯದಾದ್ಯಂತ ಈ ಕುರಿತ ಆಂದೋಲನ ನಡೆಸಲಾಗುವುದು’ ಎಂದರು.
‘ಮಂಡ್ಯದ ಅರ್ಚಕರ ಹತ್ಯೆ ಹಿಂದೆ ಇಸ್ಲಾಮಿಕ್ ಸಂಘಟನೆಗಳ ಜಿಹಾದ್ ಕೆಲಸ ಮಾಡಿರುವ ಸಾಧ್ಯತೆ ಇದೆ. ಸಮಗ್ರವಾಗಿ ತನಿಖೆಯಾಗಬೇಕು. ಹಣದ ನೆಪದಲ್ಲಿ ಬೇರೆಡೆ ಗಮನ ಸೆಳೆದು ಭಯೋತ್ಪಾದನಾ ಚಟುವಟಿಕೆ ನಡೆಸುವ ಸಾಧ್ಯತೆಯೂ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.