ADVERTISEMENT

ಮಂಡ್ಯ: ಮೊಟ್ಟೆ ಹಿಡಿದು ಪ್ರಗತಿಪರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:42 IST
Last Updated 9 ಮೇ 2025, 15:42 IST
ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಅಧಿಕಾರದಿಂದ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿ, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ವಿವಿಧ ಪ್ರಗತಿಪರ ಸಂಘಟನೆ ಮತ್ತು ಸಮಾನ ಮನಸ್ಕರ ವೇದಿಕೆ ಮುಖಂಡರು ಮೊಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ 
ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಅಧಿಕಾರದಿಂದ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿ, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ವಿವಿಧ ಪ್ರಗತಿಪರ ಸಂಘಟನೆ ಮತ್ತು ಸಮಾನ ಮನಸ್ಕರ ವೇದಿಕೆ ಮುಖಂಡರು ಮೊಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ    

ಮಂಡ್ಯ: ‘87ನೇ ಸಾಹಿತ್ಯ ಸಮ್ಮೇಳನ ನಡೆಸುವ ಸಂದರ್ಭದಲ್ಲಿ ಉದ್ಧಟತನ ತೋರಿರುವುದು, 4 ತಿಂಗಳಾದರೂ ಸ್ಮರಣ ಸಂಚಿಕೆ ಬಿಡುಗಡೆ ಮಾಡದಿರುವುದು, ಸಮ್ಮೇಳನದ ₹2.50 ಕೋಟಿಯ ಲೆಕ್ಕ ಕೊಡದಿರುವ ಆರೋಪಗಳ ಮೇರೆಗೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ತಕ್ಷಣವೇ ಅಧಿಕಾರದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿ ಜಿಲ್ಲಾ ಪ್ರಗತಿಪರ, ರೈತಪರ, ಕನ್ನಡಪರ ಸಂಘಟನೆಗಳು ಹಾಗೂ ಸಮಾನ ಮನಸ್ಕರ ವೇದಿಕೆಯ ಮುಖಂಡರು ಮೊಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರದ ಸಾಹಿತಿಗಳು ಹಾಗೂ ವಿಚಾರವಂತರ ನೇತೃತ್ವದಲ್ಲಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ವಿರುದ್ಧ ಮೇ 17ರಂದು ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರರು ಹಾಗೂ ಹಲವು ಸಂಘಟನೆಗಳು ಸೇರಿದಂತೆ ಮಹಿಳಾಪರ ಹೋರಾಟಗಾರರು ಆಗಮಿಸುತ್ತಿದ್ದಾರೆ ಎಂದರು. 

‘ನಾಡಿನಾದ್ಯಂತ ಮಹೇಶ್‌ ಜೋಶಿ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುತ್ತಿದ್ದು, ಅವರನ್ನು ಅಧಿಕಾರದಿಂದ ವಜಾ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಂದು ಜಿಲ್ಲಾಧಿಕಾರಿ ಕಚೇರಿಗೆ ಸಭೆಗೆ ಬರಬೇಕಿತ್ತು, ಆದರೆ ಏಕೆ ಬರಲಿಲ್ಲ, ಅವರ ಗೈರಿನಲ್ಲಿಯೇ ಸ್ಮರಣ ಸಂಚಿಕೆ ಬಿಡುಗಡೆ ಮಾಡಬಹುದು ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿರು.

ADVERTISEMENT

ಮನವಿ ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್‌ಗೆ ಅದರದೇ ಆದ ಸ್ಥಾನಮಾನವಿದೆ. ಅಧ್ಯಕ್ಷರಿಗೂ ಮನವಿ ಮಾಡಲಾಗಿತ್ತು. ಸ್ಮರಣ ಸಂಚಿಕೆಯ ಹೊರತರಲು ಕೆಲಸ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಒಪ್ಪಿಗೆ ಪಡೆದು ಪ್ರತಿಗಳನ್ನು ಹಂಚಲು ಸಮಯ ಕೇಳಲಾಗುವುದು. ಜೊತೆಗೆ ಸಭೆಯನ್ನು ಕರೆದಿದ್ದೇನೆ, ಅಲ್ಲಿ ಎಲ್ಲವನ್ನೂ ಅಂತಿಮ ಮಾಡೋಣ, ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗುವುದು’ ಎಂದರು. 

ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ವಿವಿಧ ಸಂಘಟನೆಯ ಮುಖಂಡರಾದ ಸಿ.ಕುಮಾರಿ, ಟಿ.ಎಲ್‌. ಕೃಷ್ಣೇಗೌಡ, ನರಸಿಂಹಮೂರ್ತಿ, ಅಭಿಗೌಡ, ಜಯರಾಂ, ಯೋಗಣ್ಣ, ಮುದ್ದೇಗೌಡ, ಕೆ.ಬೋರಯ್ಯ, ವೆಂಕಟಗಿರಿಯಯ್ಯ, ಶಶಿಕಲಾ, ಕೃಷ್ಣಪ್ರಕಾಶ್‌, ಪಣ್ಣೇದೊಡ್ಡಿ ಹರ್ಷ, ಮಹೇಶ್‌, ಸುರೇಶ್‌, ಚಂದಗಾಲು ಲೋಕೇಶ್‌, ಎಂ.ವಿ. ಧರಣೇಂದ್ರಯ್ಯ, ಕಾರಸವಾಡಿ ಮಹದೇವು, ಸುರೇಶ್‌ ಕೀಲಾರ, ಲಂಕೇಶ್‌ ಮಂಗಲ, ಹುರುಗಲವಾಡಿ ರಾಮಯ್ಯ ಭಾಗವಹಿಸಿದ್ದರು.

ಪೊಲೀಸ್‌ ರಕ್ಷಣೆ ಏಕೆ ಬೇಕು?’

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ ‘ನಾವು ಪ್ರತಿಭಟನೆ ಮಾಡುತ್ತಿರುವುದು ಜೋಶಿ ಅವರಿಗೆ ಬುದ್ಧಿ ಕಲಿಸಲು ಜೋಶಿ ಅವರೇ ಮಂಡ್ಯದವರು ಕೊಟ್ಟ ಅನ್ನವನ್ನು ಮರೆತುಬಿಟ್ರಾ ಮಂಡ್ಯಕ್ಕೆ ಬರಲು ಪೊಲೀಸರ ರಕ್ಷಣೆಯಲ್ಲಿ ಬರುತ್ತೇವೆ ಎಂದರೆ ಏನು ಅರ್ಥ’ ಎಂದು ಪ್ರಶ್ನಿಸಿದರು. ‘ಮಂಡ್ಯದಲ್ಲಿ ಇಂದು ಸ್ಮರಣ ಸಂಚಿಕೆ ಸಮಾಲೋಚನಾ ಸಭೆ ಇತ್ತು. ನೀವು ಯಾವ ಕಾರಣಕ್ಕೆ ಬಂದಿಲ್ಲ ಎನ್ನುವುದು ಗೊತ್ತಿಲ್ಲ. ನೀವು ಮಂಡ್ಯಕ್ಕೆ ಬರಬೇಕಾದರೆ ನಿಮ್ಮ ಮೇಲಿರುವ ಕಳಂಕವನ್ನು ತೊಳೆದುಕೊಂಡು ಬರಬೇಕು. ಕಸಾಪ ಎಂದರೆ ಅದಕ್ಕೆ ಆದ ಮೌಲ್ಯವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಇದು ಎಚ್ಚರಿಕೆ ಮಾತಾಗಿದೆ ನೀವು ತೆಗೆದುಕೊಳ್ಳುತ್ತಿರುವ ತೀರ್ಮಾನ ಪರಿಷತ್‌ ವಿರೋಧಿಯಾಗಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.