ಮಂಡ್ಯ: ‘ಪಿಎಸ್ಐ ನೇಮಕಾತಿ ಅಕ್ರಮದ ಮೂಲ ಹುಡುಕುತ್ತಾ ಹೊರಟರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಸಿಕ್ಕಿ ಬೀಳುತ್ತಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬುಧವಾರ ಆರೋಪಿಸಿದರು.
ಮೇಲುಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶಾಂತಾರಾಂ ಪ್ರಕರಣ ನಡೆದಿತ್ತು, ಸಿದ್ದರಾಮಯ್ಯ ತನಿಖೆ ಮಾಡಿದರಾ? ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಾತಿ ಅಕ್ರಮದ ತನಿಖೆ ಆಯಿತಾ? ಹಗರಣಗಳನ್ನು ಮುಚ್ಚಿ ಹಾಕುವುದೇ ಸಿದ್ದರಾಮಯ್ಯ ಅವರ ಕೆಲಸವಾಗಿತ್ತು. ಅವರದು ಅಪವಿತ್ರ, ಅನೈತಿಕ, ಅಕ್ರಮ ಆಡಳಿತವಾಗಿತ್ತು’ ಎಂದು ಕಿಡಿಕಾರಿದರು.
‘ನಾವು ಅಕ್ರಮವನ್ನು ಬಯಲಿಗೆಳೆಯುವ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಮಾಡಿರುವ ಕರ್ಮಕಾಂಡ ಆಗಾಗ ಅವರಿಗೆ ನೆನಪಾಗುತ್ತಿರುತ್ತದೆ. ಹೀಗಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವಧಿ ಮುಗಿದ (ಔಟ್ಡೇಟೆಡ್) ರಾಜಕಾರಣಿ, ಹಳೇ ಸೈಕಲ್ ಓಡಿಸಲಾಗುತ್ತಿದೆ. ಸಿ.ಎಂ ಆಗಿದ್ದಾಗ ಇದೇ ಕಡೇ ಅವಧಿ ಎಂದು ಹೇಳಿದ್ದರು. ಪದೇ ಪದೇ 5 ವರ್ಷ ಹೇಳಿಕೊಂಡು ಮುಂದುವರಿಯುತ್ತಲೇ ಇದ್ದಾರೆ, ಯುವಕರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.