ADVERTISEMENT

ಮದ್ದೂರು: ಸಾರ್ವಜನಿಕ ಸ್ಮಶಾನ; ಮೂಲಸೌಕರ್ಯವಿಲ್ಲದೆ ಅಧ್ವಾನ

ಸಮರ್ಪಕ ರಸ್ತೆಯಿಲ್ಲದೆ ಸಾರ್ವಜನಿಕರ ಪರದಾಟ; ನೀರು–ನೆರಳಿನ ವ್ಯವಸ್ಥೆ ಕಲ್ಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 8:38 IST
Last Updated 24 ಮಾರ್ಚ್ 2025, 8:38 IST
ಮದ್ದೂರಿನ ಕೊಪ್ಪ ವೃತ್ತದ ಬಳಿಯಿರುವ ಸಾರ್ವಜನಿಕ ಸ್ಮಶಾನದಲ್ಲಿ ಗಿಡಗಂಟಿ ಬೆಳೆದು, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯಗಳು ಇಲ್ಲದಿರುವುದು
ಮದ್ದೂರಿನ ಕೊಪ್ಪ ವೃತ್ತದ ಬಳಿಯಿರುವ ಸಾರ್ವಜನಿಕ ಸ್ಮಶಾನದಲ್ಲಿ ಗಿಡಗಂಟಿ ಬೆಳೆದು, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯಗಳು ಇಲ್ಲದಿರುವುದು   

ಮದ್ದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಕಡೆ ಸಾರ್ವಜನಿಕ ಸ್ಮಶಾನಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು, ಅಂತ್ಯಕ್ರಿಯೆ ವೇಳೆ ಸಾರ್ವಜನಿಕರು ಪರದಾಡುವಂತಾಗಿದೆ. 

ಮದ್ದೂರು ಪಟ್ಟಣದ ವ್ಯಾಪ್ತಿಯಲ್ಲಿ ಕೊಪ್ಪ ವೃತ್ತದ ಬಳಿಯಿರುವ ರುಧ್ರಭೂಮಿ (ಒಕ್ಕಲಿಗರ), ವಿಶ್ವಕರ್ಮ ರುಧ್ರಭೂಮಿ, ಹೊಳೆ ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಲಿಂಗಾಯತರ ಸ್ಮಶಾನ, ಬ್ರಾಹ್ಮಣರ ಸ್ಮಶಾನ, ಪೌರಕಾರ್ಮಿಕರ ಸ್ಮಶಾನ, ಜೈನರ ಸ್ಮಶಾನ, ಹಳೇ ವೈದ್ಯನಾಥಪುರ ರಸ್ತೆಯಲ್ಲಿರುವ ದಲಿತರ ಸ್ಮಶಾನ, ಶಿವಪುರದ ಕೋಡಿಹಳ್ಳಿ ರಸ್ತೆಯಲ್ಲಿರುವ ರುಧ್ರಭೂಮಿ, ಮಳವಳ್ಳಿ ರಸ್ತೆಯಲ್ಲಿರುವ ಕ್ರೈಸ್ತರ ಸ್ಮಶಾನ, ತಾಲ್ಲೂಕು ಕ್ರೀಡಾಂಗಣದ ರಸ್ತೆಯಲ್ಲಿರುವ ಮುಸ್ಲಿಮರ ಸ್ಮಶಾನ, ಚನ್ನೇಗೌಡನದೊಡ್ಡಿ ಬಳಿಯಿರುವ ರುಧ್ರಭೂಮಿ ಸೇರಿದಂತೆ ಒಟ್ಟು 11 ಸ್ಮಶಾನಗಳು ಇವೆ. 

ಸ್ಥಳೀಯ ಪುರಸಭೆಯಿಂದ ನಿರ್ವಹಿಸಲ್ಪಡುತ್ತಿರುವ ಈ ಸಾರ್ವಜನಿಕ ಸ್ಮಶಾನಗಳಲ್ಲಿ ಕುಡಿಯುವ ನೀರು, ಸೂಕ್ತ ನೆರಳಿನ ವ್ಯವಸ್ಥೆ, ಸ್ವಚ್ಛತೆ, ಸ್ನಾನಗೃಹ ಸೇರಿದಂತೆ ಮೂಲಸೌಕರ್ಯ ಕೊರತೆ ಹಲವಾರು ವರ್ಷಗಳಿಂದಲೂ ಎದ್ದು ಕಾಣುತ್ತಿದೆ. ಅಂತ್ಯಕ್ರಿಯೆ ವೇಳೆ ಮಳೆ ಬಂದರೆ ಹಾಗೂ ಬಿಸಿಲಿನ ವೇಳೆಯಲ್ಲಿ ನೂರಾರು ಜನರು ಆಶ್ರಯ ಪಡೆಯಲು ಶೆಲ್ಟರ್‌ ವ್ಯವಸ್ಥೆಯಿಲ್ಲ. ಕುಳಿತುಕೊಳ್ಳಲು ಯಾವುದೇ ಆಸನಗಳಿಲ್ಲದೇ ಗಂಟೆಗಟ್ಟಲೆ ಜನರು ನಿಂತುಕೊಳ್ಳಬೇಕಾದ ಪರಿಸ್ಥಿತಿಯಿದೆ. 

ADVERTISEMENT

ಕೆಲವೊಮ್ಮೆ ಅಂತ್ಯಕ್ರಿಯೆ ನಡೆಸಲು ಸಂಜೆಯಾಗಿ ತುಸು ಕತ್ತಲಾದರಂತೂ ಸ್ಮಶಾನಗಳಲ್ಲಿ ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಇದರಿಂದ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.  

ಈ ಬಗ್ಗೆ ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಗಳಲ್ಲಿ ಎಷ್ಟೊ ಬಾರಿ ಪುರಸಭೆಗೆ ಬರುವ ಅನುದಾನಗಳಡಿ ಸಾರ್ವಜನಿಕ ಸ್ಮಶಾನಗಳಲ್ಲಿ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸಿ ನಿಯಮಿತವಾಗಿ ಸ್ವಚ್ಛತೆ ಮಾಡಿ ನಿರ್ವಹಣೆ ಮಾಡಲು ಪುರಸಭಾ ಸದಸ್ಯರಾದ ಮನೋಜ್ ಸೇರಿದಂತೆ ಹಲವಾರು ಸದಸ್ಯರು ಆಗ್ರಹಿಸಿದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ.

ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ!

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಸ್ಮಶಾನಗಳು ಅಧ್ವಾನ ಸ್ಥಿತಿಯಲ್ಲಿವೆ. ಭಾರತೀನಗರ ಸಮೀಪದ ಮೆಣಸಗೆರೆ ಗ್ರಾಮದಲ್ಲಿ ಸುತ್ತಲೂ ಜಮೀನುಗಳಿದ್ದು ಅದರಲ್ಲಿ ಬೆಳೆ ಬೆಳೆಯುವುದರಿಂದ ಸಾರ್ವಜನಿಕ ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ. ಶವವನ್ನು ಹೊತ್ತು ಬೆಳೆ ಇರುವ ಜಮೀನುಗಳಲ್ಲಿ ಹೋಗುವುದರಿಂದ ಹಲವು ಬಾರಿ ಜಗಳಗಳೂ ಆಗಿವೆ ಎನ್ನುತ್ತಾರೆ ಗ್ರಾಮಸ್ಥರು.

ತಾಲ್ಲೂಕಿನ ಚಿಕ್ಕರಸಿನಕೆರೆ ಹೋಬಳಿಯಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ದೊಡ್ಡ ಗ್ರಾಮವಾದ ಕಾಡುಕೊತ್ತನಹಳ್ಳಿಯಲ್ಲಿ ದಲಿತರ ಸ್ಮಶಾನ ಬಿಟ್ಟರೆ ಉಳಿದಂತೆ ಸಾರ್ವಜನಿಕ ಸ್ಮಶಾನವೇ ಇಲ್ಲವಾಗಿದೆ.

ಇನ್ನಾದರೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳು ಗಮನಹರಿಸಿ ಸಾರ್ವಜನಿಕ ಸ್ಮಶಾನಗಳ ಸಮಸ್ಯೆಗಳಿಗೆ ಇತಿಶ್ರೀ ಹಾಕಲಿ ಎಂಬುದು ಸಾರ್ವನಿಕರ ಆಗ್ರಹವಾಗಿದೆ. 

ಭಾರತಿನಗರದ ಸಮೀಪದ ಮೆಣಸಗೆರೆ ಗ್ರಾಮದಲ್ಲಿನ ಸಾರ್ವಜನಿಕ ಸ್ಮಶಾನಕ್ಕೆ ಸಂಪರ್ಕ ರಸ್ತೆಯೇ ಇಲ್ಲ

ಏನು ಹೇಳ್ತಾರೆ...?

ಸ್ಥಳೀಯ ಪುರಸಭಾ ಸದಸ್ಯನಾಗಿ ಹಲವು ಬಾರಿ ಪುರಾಸಭೆಯ ಸಾಮಾನ್ಯ ಸಭೆಗಳಲ್ಲಿ ಪಟ್ಟಣದ ವ್ಯಾಪ್ತಿಯ ಸಾರ್ವಜನಿಕ ಸ್ಮಶಾನಗಳಲ್ಲಿ ಅಗತ್ಯ ಮೂಲಸೌಕರ್ಯಗನ್ನು ಒದಗಿಸಿ ಅಭಿವೃದ್ಧಿಪಡಿಸಲು ಒತ್ತಾಯಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು  ಸೂಕ್ತ ಕ್ರಮ ಕೈಗೊಂಡಿಲ್ಲ.

- ಮನೋಜ್ ಪುರಸಭಾ ಸದಸ್ಯ ಮದ್ದೂರು

***

ಮದ್ದೂರು ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿನ ಸಾರ್ವಜನಿಕ ಸ್ಮಶಾನಕ್ಕೆ ಸೇರಿದ 5-6 ಗುಂಟೆ ಸ್ಥಳವನ್ನು ಅಕ್ಕಪಕ್ಕದವರು ಅತಿಕ್ರಮಿಸಿಕೊಂಡಿರುವುದರಿಂದ ತಾಲ್ಲೂಕು ಆಡಳಿತ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು.

– ಪುಟ್ಟರಾಮು ಮುಖಂಡರು ಮೆಳ್ಳಹಳ್ಳಿ ಗ್ರಾಮ

***

ಸಾರ್ವಜನಿಕ ಸ್ಮಶಾನಗಳಿಗೆ ಮೂಲಸೌಕರ್ಯ ಕಲ್ಪಿಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಮುಂಬರುವ ಪುರಸಭೆ ಬಜೆಟ್‌ನಲ್ಲಿ ಹಣವನ್ನು ಮೀಸಲಿರಿಸುವ ಸಂಬಂಧ ಚರ್ಚೆ ನಡೆಸಿ ನಿರ್ಧರಿಸಲಾಗುವುದು

– ಮೀನಾಕ್ಷಿ ಮುಖ್ಯಾಧಿಕಾರಿ ಮದ್ದೂರು ಪುರಸಭೆ

ಸ್ಮಶಾನ ಒತ್ತುವರಿ ತೆರವಿಗೆ ಮನವಿ

ಮದ್ದೂರು ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿನ ಸ್ಮಶಾನವು ಬಹುತೇಕ ಒತ್ತುವರಿಯಾಗಿದ್ದು ಈ ಬಗ್ಗೆ ಗ್ರಾಮದ ಮುಖಂಡರು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಜಿಲ್ಲಾಡಳಿತದವರೆಗೂ ಮನವಿ ಪತ್ರ ಸಲ್ಲಿಸಿದ್ದಾರೆ.   ಬಿದರಹಳ್ಳಿ ಯಲಾದಹಳ್ಳಿ ಗ್ರಾಮಗಳಲ್ಲಿನ ಸಾರ್ವಜನಿಕ ಸ್ಮಶಾನಗಳ ಜಾಗವು ಒತ್ತುವರಿಯಾಗಿದೆ. ಬಿದರಹೊಸಹಳ್ಳಿ ಗ್ರಾಮದಲ್ಲಿರುವ ಸ್ಮಶಾನಕ್ಕೆ ಗ್ರಾಮದಿಂದ 2 ಕಿ.ಮೀ ಇರುವ ಕಾರಣ ಅನಾನುಕೂಲವಾಗುತ್ತಿರುವ ಕೂಗು ಜನರಿಂದ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.