ADVERTISEMENT

ಸಹಬಾಳ್ವೆ, ಸಹಿಷ್ಣುತೆ ಸಾರುವ ಪು.ತಿ.ನ ಕಾವ್ಯ: ಡಾ.ಶಿಲ್ಪಶ್ರೀ ಅಭಿಮತ

ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 10:11 IST
Last Updated 2 ಫೆಬ್ರುವರಿ 2020, 10:11 IST
ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪ್ರಾಧ್ಯಾಪಕಿ ಶಿಲ್ಪಶ್ರೀ ಮಾತನಾಡಿದರು
ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪ್ರಾಧ್ಯಾಪಕಿ ಶಿಲ್ಪಶ್ರೀ ಮಾತನಾಡಿದರು   

ಪಾಂಡವಪುರ (ಮೇಲುಕೋಟೆ, ಪು.ತಿ.ನ ವೇದಿಕೆ): ಧರ್ಮ ಮನುಷ್ಯನ ಬದುಕಿಗೆ ಬೇಕು. ಹಲವು ಮನಗಳು ಹಾಗೂ ಒಡಲು ಇರುವ ಈ ಜಗತ್ತಿನ ಗುರಿಯೊಂದೇ, ಅದು ಆನಂದ. ಆ ಆನಂದ ಧರ್ಮದಲ್ಲಿದೆ ಎಂಬ ನಂಬಿಕೆ ಕವಿ ಪು.ತಿ.ನರಸಿಂಹಾಚಾರ್‌ ಅವರಲ್ಲಿತ್ತು ಎಂದು ಕನ್ನಡ ಪ್ರಾಧ್ಯಾಪಕಿ ಡಾ.ಶಿಲ್ಪಶ್ರೀ ಹೇಳಿದರು.

ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ‘ಪು.ತಿ.ನ ಸಾಹಿತ್ಯ ವೈಶಿಷ್ಟ್ಯಗಳು’ ಕುರಿತು ಅವರು ಮಾತನಾಡಿದರು.

ದೇವರು ಕೂಡ ಗುಡಿಯಲ್ಲಿದ್ದಾನೆ. ಆದರೆ, ಅವನನ್ನು ಕಾಣುವ ಭಕ್ತಿ, ಪ್ರೇಮ, ಮಾನವನ ಎದೆಯಲ್ಲಿ ಇರುವುದೇ ಹೊರತು ಆಚರಣೆಯಲ್ಲಲ್ಲ. ಧರ್ಮದ ಭಕ್ತಿಯ ಗುರಿ ಅಧ್ಯಾತ್ಮ. ಅದು ರಸಪಥವನ್ನು ಮುಟ್ಟಬೇಕು. ಈ ಹಾದಿಯಲ್ಲಿ ಪ್ರೀತಿ, ಕರುಣೆ, ಮಾನವೀಯತೆ, ಪೂರ್ಣತೆ ಎಲ್ಲವೂ ಮೇಳೈಸಿದಾಗ ಅಧ್ಯಾತ್ಮ ಲಭಿಸುತ್ತದೆ ಎಂದು ಪು.ತಿ.ನ ಹೇಳುತ್ತಿದ್ದರು ಎಂದು ತಿಳಿಸಿದರು.

ADVERTISEMENT

ಪು.ತಿ.ನ. ಅವರುಪಾಶ್ಚಾತ್ಯ ಸಾಹಿತ್ಯವನ್ನು ತಿಳಿದಿದ್ದರೂ ಅದರ ಪ್ರಭಾವಕ್ಕೆ ಸಿಲುಕದೆ ಭಾರತೀಯ ಪುರಾಣ ಮತ್ತು ಪರಂಪರೆಯನ್ನು ಆಧುನಿಕ ಚಿಂತನೆಧಾರೆಗೆ ಅಳವಡಿಸಿ ಕೊಂಡರು. ಧರ್ಮವನ್ನು ಗುರಿಯಾಗಿಸಿ ಕೊಂಡ ಇವರ ಕಾವ್ಯ ಸಹಬಾಳ್ವೆ, ಸಹಿಷ್ಣುತೆ, ಮಾನವೀಯತೆಯನ್ನು ಹೇಳುತ್ತದೆ. ಸಾಹಿತ್ಯವು ಬದುಕನ್ನು ಶಿವಮಯ ವಾಗಿಸಬೇಕು. ಮನಸ್ಸು, ಅಧ್ಯಾತ್ಮದ ಉನ್ನತಿ ಪಡೆಯಬೇಕು ಎಂದರು.

ಕನ್ನಡ ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ‌‘ಜಾಗತೀಕರಣದಿಂದಾಗಿ ಜನಪದ ಕಲೆ ನಶಿಸಿಹೋಗುತ್ತಿದೆ. ರಾಗಿಬೀಸುವ ಪದ, ಗಾಧೆ ಸೇರಿದಂತೆ ಹಲವು ಜಾನಪದ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ನಾರಾಯಣಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲೇಖಕಿ ಶುಭಶ್ರೀ ಪ್ರಸಾದ್ ಆಶಯ ನುಡಿಗಳನ್ನಾಡಿದರು. ನಿವೃತ್ತ ಪ್ರಾಧ್ಯಾಪಕ ನರಸಿಂಹೇಗೌಡ ನಾರಣಾಪುರ ಮಾತನಾಡಿದರು. ಉಪನ್ಯಾಸಕ ಡಾ.ಉಮೇಶ್ ಬೇವಿನಹಳ್ಳಿ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.