
ಪಾಂಡವಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಮನೆ ಮುಂದೆ ಸಂಕ್ರಾಂತಿ ಶುಭಾಶಯ ಕೋರುವ ರಂಗುರಂಗಿನ ರಂಗೋಲೆ ಬಿಡಿಸಿದರು. ಹೊಸ ಮಣ್ಣಿನ ಮಡಿಕೆಯಲ್ಲಿ ಬೆಲ್ಲದ ಅನ್ನ, ಸಿಹಿ ಮತ್ತು ಖಾರ ಪೊಂಗಲ್ ತಯಾರಿಸಿ ಸವಿದರು. ಪುಟ್ಟ ಮಕ್ಕಳು ಹಾಗೂ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ತಮ್ಮ ನೆರೆಹೊರೆಯ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ, ಕಬ್ಬು ನೀಡಿ ಶುಭಾಶಯ ಕೋರಿದರು.
ಯುವಕರು ಜಾನುವಾರುಗಳ ಮೈ ತೊಳೆದು, ಅವುಗಳ ಕೊಂಬಿಗೆ ಬಣ್ಣ ಬಳಿದು ಬಣ್ಣ ಬಣ್ಣದು ಟೇಪ್ ಕಟ್ಟಿ ಶೃಂಗರಿಸಿದರು. ಬಳಿಕ ಸಂಜೆ ಎತ್ತುಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಸೂರ್ಯ ಮುಳುಗುತ್ತಿದ್ದಂತೆ ಎತ್ತುಗಳನ್ನು ಕಿಚ್ಚು ಹಾಯಿಸಿದರು. ನಂತರ ರೈತರು ತಮ್ಮ ಜಾನುವಾರುಗಳೊಂದಿಗೆ ಮನೆಗೆ ತೆರಳಿದಾಗ, ಮನೆಯೊಡತಿ ಎತ್ತುಗಳಿಗೆ ಪೂಜೆ ಸಲ್ಲಿಸಿ ದನಗಳ ಪಾದಗಳಿಗೆ ನಮಸ್ಕರಿಸಿದರು. ಜಾನುವಾರುಗಳಿಗೆ ಬೆಲ್ಲದ ಅನ್ನ ತಿನ್ನಿಸಿದರು. ರಾತ್ರಿ ಮನೆಮಂದಿಯಲ್ಲ ವಿಶೇಷ ಊಟ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.