ADVERTISEMENT

ಬೆಂಗಳೂರಿನ ಉದ್ಯಮಿಯಿಂದ ಸರ್ಕಾರಿ ಶಾಲೆಗೆ ನೂತನ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 3:12 IST
Last Updated 4 ಸೆಪ್ಟೆಂಬರ್ 2025, 3:12 IST
ಶ್ರೀರಂಗಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಗ್ರಾಮದ ಮುಖಂಡರು ಬುಧವಾರ ಭೂಮಿಪೂಜೆ ನೆರವೇರಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಗ್ರಾಮದ ಮುಖಂಡರು ಬುಧವಾರ ಭೂಮಿಪೂಜೆ ನೆರವೇರಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲವಾಗಿದ್ದು, ಬೆಂಗಳೂರಿನ ಉದ್ಯಮಿ ಕೃಷ್ಣಪ್ರಸಾದ್ ಎಂಬವರು ₹20 ಲಕ್ಷ ವೆಚ್ಚದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ.

ರಾಂಪುರ ಗ್ರಾಮದಲ್ಲಿ ‘ರಾಂಪುರ ಆರ್ಗ್ಯಾನಿಕ್‌’ ಹೆಸರಿನ ಸಂಸ್ಥೆ ಕಟ್ಟಿರುವ ಕೃಷ್ಣಪ್ರಸಾದ್ ಎರಡು ಅಂತಸ್ತಿನ ಶಾಲಾ ಕಟ್ಟಡ ಕಟ್ಟಿಕೊಡಲು ಧನ ಸಹಾಯ ಮಾಡಿದ್ದಾರೆ. ಗ್ರಾಮಸ್ಥರಿಗೆ ಈಗಾಗಲೇ ಹಣ ನೀಡಿದ್ದು, ಬುಧವಾರ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

‘ಈಗಿರುವ ಶಾಲೆಯ ಕಟ್ಟಡಕ್ಕೆ ಹೊಂದಿಕೊಂಡಿದ್ದ ಖಾಸಗಿ ಜಾಗವನ್ನೂ ಕೃಷ್ಣಪ್ರಸಾದ್ ಖರೀದಿಸಿಕೊಟ್ಟಿದ್ದಾರೆ. ಇನ್ನು 6 ತಿಂಗಳಲ್ಲಿ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಗ್ರಾಮದ ಮುಖಂಡ ಹಾಗೂ ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎನ್‌. ಗುರುಪ್ರಸಾದ್ ತಿಳಿಸಿದರು.

ADVERTISEMENT

‘ರಾಂಪುರ ಸರ್ಕಾರಿ ಶಾಲೆಗೆ ಕೃಷ್ಣಪ್ರಸಾದ್ ಇಬ್ಬರು ಶಿಕ್ಷಕರನ್ನೂ ನೇಮಿಸಿ ಸಂಬಳ ಕೊಡುತ್ತಿದ್ದಾರೆ. ಪ್ರಸಕ್ತ ವರ್ಷದಿಂದ ಶಾಲೆಯ ಹಾಜರಾತಿ ಮೂರು ಪಟ್ಟು ಹೆಚ್ಚಾಗಿದೆ. ಶಾಲೆಯ ಕಟ್ಟಡ ನಿರ್ಮಾಣವಾದ ಬಳಿಕ ಅಕ್ಕಪಕ್ಕದ ಗ್ರಾಮಗಳ ವಿದ್ಯಾರ್ಥಿಗಳನ್ನು ಕರೆ ತರಲು ವಾಹನ ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್‌. ಸಂದೇಶ್ ಹೇಳಿದರು.

‘ಕೃಷ್ಣಪ್ರಸಾದ್ ರಾಂಪುರ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಂಜನೇಯಸ್ವಾಮಿ ದೇವಾಲಯವನ್ನೂ ನಿರ್ಮಿಸುತ್ತಿದ್ದಾರೆ’ ಎಂದು ಗ್ರಾ.ಪಂ. ಸದಸ್ಯ ಮೋಹನಕುಮಾರ್‌ (ಮುರಳಿ) ತಿಳಿಸಿದರು. ಮುಖಂಡರಾದ ಶ್ರೀಕಂಠು, ಗುರುರಾಜ್‌, ಪ್ರೀತಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.