ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಸರ್ವರ್ ಸಮಸ್ಯೆ ಉಂಟಾಗಿ ಶನಿವಾರ ಲಸಿಕೆ ಹಾಕಿಸಿಕೊಳ್ಳಲು ಹಾಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬಂದವರು ಎರಡು ತಾಸು ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ಉಂಟಾಗಿತ್ತು.
ಬೆಳಿಗ್ಗೆ 9.30ಕ್ಕೆ ಬಂದವರು 11.30ರವರೆಗೂ ಕಾದು ಕುಳಿತಿದ್ದರು. ವೃದ್ಧರು, ಮಹಿಳೆಯರು, ಮಧುಮೇಹ ಇರುವವರು ಬಸವಳಿದರು. ದೂರದ ಹಳ್ಳಿಗಳಿಂದ ಬಂದವರೂ ತೊಂದರೆ ಅನುಭವಿಸಿದರು. ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಬೆಳಿಗ್ಗೆ 9.30ರಿಂದ ಕಾಯುತ್ತಿದ್ದೇನೆ. ಎರಡು ಗಂಟೆ ಕಳೆದರೂ ಲಸಿಕೆ ಕೊಟ್ಟಿಲ್ಲ. ಕೋವಿಡ್ ಪರೀಕ್ಷೆಯೂ ನಡೆಯುತ್ತಿಲ್ಲ. ಇಲ್ಲಿನ ಸಿಬ್ಬಂದಿ ಆ್ಯಪ್ ಸರಿಯಿಲ್ಲ, ಸರ್ವರ್ ಸರಿಯಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ’ ಎಂದು ಕೆ.ಶೆಟ್ಟಹಳ್ಳಿಯ ಕುಬೇರಪ್ಪ ದೂರಿದರು.
‘ಇದು ಆಸ್ಪತ್ರೆಯ ಸಮಸ್ಯೆಯಲ್ಲ. ಸರ್ಕಾರದ ಆ್ಯಪ್ ದಿಢೀರ್ ಸ್ಥಗಿತಗೊಂಡಿದೆ. ಮೇಲಧಿಕಾರಿಗಳ ಜತೆ ಮಾತನಾಡಿದ್ದೇವೆ. ಸರಿ ಹೋಗುತ್ತದೆ ಎಂದು ಹೇಳಿದ್ದಾರೆ. ಜನರು ಅನಿವಾರ್ಯವಾಗಿ ಕಾಯಬೇಕು’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.