
ಮಂಡ್ಯ: ಭಾರತ ದೇಶದ ಸಾಂಸ್ಕೃತಿಕ ವೈಭವ ಹೆಚ್ಚಿಸಿ ಸಾಮ್ರಾಜ್ಯ ಸ್ಥಾಪಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯು ಪರಕೀಯರ ದಾಳಿಗೆ ತುತ್ತಾದ ಸಂದರ್ಭದಲ್ಲಿ ಜನಿಸಿ ಅದರ ರಕ್ಷಣೆ ಮಾಡುತ್ತಾ ಎತ್ತಿ ಹಿಡಿದ ವೀರ ಶಿವಾಜಿ ಮಹಾರಾಜರು ಇಂದಿಗೂ ಪ್ರಸ್ತುತವಾಗಿ ಕಾಣುತ್ತಾರೆ. ಶಿವಾಜಿಯ ತಾಯಿ ರಾಮಾಯಣ, ಮಹಾಭಾರತ ಕಥೆ ಹೇಳುವ ಮೂಲಕ ಶಿವಾಜಿಯಲ್ಲಿ ಧರ್ಮ, ನ್ಯಾಯದ ಚಿಂತನೆ ಬಿತ್ತಿದರು’ ಎಂದು ಶ್ಲಾಘಿಸಿದರು.
‘ನಿಷ್ಠೆ, ಪ್ರಾಮಾಣಿಕತೆ ಹಾಗೂ ಕಾರ್ಯ ತಂತ್ರಗಳನ್ನು ಶಿವಾಜಿ ಮಹಾರಜರಲ್ಲಿ ಕಾಣಬಹುದು. ಅದನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು. ಶಿವಾಜಿ ಕುರಿತಾಗಿ ವಿಚಾರ, ಚಿಂತನೆಗಳನ್ನು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳುವುದು ಎಲ್ಲರಿಗೂ ಮುಖ್ಯವಾಗಬೇಕು’ ಎಂದು ಸಲಹೆ ನೀಡಿದರು.
ಹಿಂದೂ ಧರ್ಮದ ರಕ್ಷಣೆಗಾಗಿ ದೆಹಲಿ ಸುಲ್ತಾನರನ್ನು ಎದುರಿಸಿದರು. ಶಿವಾಜಿ ಮನೆತನ 250 ವರ್ಷಗಳಿಗಿಂತ ಹೆಚ್ಚು ಕಾಲ ಸುದೀರ್ಘ ಆಡಳಿತ ನಡೆಸಿದ ಸಾಮ್ರಾಜ್ಯವನ್ನು ಸ್ಥಾಪಿಸಿದರು ಎಂದರು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಮರಾಠ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಅಂಬೊಜಿ, ಖಜಾಂಚಿ ರಾಜೇಶ್, ಸಂಘಟಕಿ ಬಿ.ಎಸ್.ಅನುಪಮಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.