ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂ ಗ್ರಾಮದಲ್ಲಿ ಈಚೆಗೆ ಮೃತಪಟ್ಟ ಜಿ.ಸಿ.ರವಿಚಂದ್ರ ಎಂಬುವರ ಮಿಶ್ರ ತಳಿಯ ಹಸು ರೇಬಿಸ್ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ.
ರೇಬಿಸ್ ಸೋಂಕು ಉಲ್ಬಣಿಸಿ ಎರಡು ದಿನಗಳ ಕಾಲ ವಿಚಿತ್ರ ವರ್ತನೆ ತೋರುತ್ತಿದ್ದ ಹಸು ಮೃತಪಟ್ಟಿತ್ತು. ಪಶು ವೈದ್ಯರು ಹಸುವಿನ ಕಳೇಬರದ ಪಂಚನಾಮೆ ನಡೆಸಿ ಅದರ ಅಂಗಾಂಶ ಪರೀಕ್ಷೆಗಾಗಿ ಪ್ರಯೋಗ ಶಾಲೆಗೆ ಕಳುಹಿಸಿದ್ದರು. ಹಸು ರೇಬಿಸ್ ಸೋಂಕಿನಿಂದ ಮೃತಪಟ್ಟಿದೆ ಎಂದು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ತಂಡ ಶುಕ್ರವಾರ ಗಂಜಾಂ ಗ್ರಾಮಕ್ಕೆ ತೆರಳಿ ಸಮೀಕ್ಷೆ ನಡೆಸಿತು. ಹಸುವಿನ ಮಾಲೀಕರ ಕುಟುಂಬದ ಸದಸ್ಯರು ಮತ್ತು ಅದರ ಸಂಪರ್ಕದಲ್ಲಿದ್ದವರ ಆರೋಗ್ಯ ತಪಾಸಣೆ ನಡೆಸಿತು.
‘ಹಸುವಿನ ಮಾಲೀಕರ ಕುಟುಂಬ ಸದಸ್ಯರು ಸೇರಿ 6 ಮಂದಿಗೆ 4 ಡೋಸ್ ರೇಬಿಸ್ ವಿರುದ್ಧದ ಚುಚ್ಚುಮದ್ದು ನೀಡಲಾಗುವುದು. ಮೃತಪಟ್ಟ ಹಸುವಿನ ಜತೆಯಲ್ಲಿದ್ದ ಇತರ ಹಸುಗಳಿಗೂ ಲಸಿಕೆ ಹಾಕುವಂತೆ ಪಶು ವೈದ್ಯರಿಗೆ ತಿಳಿಸಲಾಗಿದೆ’ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಹೇಳಿದರು.
‘ರೇಬಿಸ್ ಸೋಂಕಿತ ನಾಯಿ ಹಸುವಿಗೆ ಕಚ್ಚಿ, ಹಸುವಿಗೂ ಸೋಂಕು ಅಂಟಿ ಮೃತಪಟ್ಟಿರುವ ಸಾಧ್ಯತೆ ಇದೆ. ಗಂಜಾಂನ ಮಕಾನ ಪ್ರದೇಶದಲ್ಲಿ ಕೋಳಿ ಅಂಗಡಿಗಳ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆಯಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.