ADVERTISEMENT

ಶ್ರೀರಂಗಪಟ್ಟಣ | ಮೀನು ಸಾಕಣೆ ಲಾಭದಾಯಕ: ರಂಜಿತಾ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:49 IST
Last Updated 8 ಫೆಬ್ರುವರಿ 2026, 3:49 IST
ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದ ಕೆರೆಗೆ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಶುಕ್ರವಾರ ಮೀನಿನ ಮರಿಗಳನ್ನು ಬಿಟ್ಟರು
ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದ ಕೆರೆಗೆ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಶುಕ್ರವಾರ ಮೀನಿನ ಮರಿಗಳನ್ನು ಬಿಟ್ಟರು   

ಶ್ರೀರಂಗಪಟ್ಟಣ: ‘ಮೀನು ಸಾಕಣೆ ಲಾಭದಾಯಕ ಕಸುಬಾಗಿದ್ದು, ಕೆರೆ, ಕಟ್ಟೆ, ಬಾವಿಗಳಲ್ಲಿ ಮೀನು ಬೆಳೆಸುವುದರಿಂದ ಆದಾಯ ಗಳಿಸಲು ಸಾಧ್ಯ’ ಎಂದು ಮೇಳಾಪುರ ಸಂಜೀವಿನಿ ಸೂರ್ಯಕಾಂತಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಎಚ್‌.ಎಸ್‌. ರಂಜಿತಾ ಹೇಳಿದರು.

ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದ ಕೆರೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಅಡಿಯಲ್ಲಿ ಶುಕ್ರವಾರ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೀನು ಪೌಷ್ಠಿಕ ಆಹಾರವಾಗಿದ್ದು ಹೆಚ್ಚು ಜನರು ತಿನ್ನಲು ಬಯಸುತ್ತಾರೆ. ಹಾಗಾಗಿ ವರ್ಷದ ಎಲ್ಲ ದಿನಗಳಲ್ಲೂ ಮೀನಿಗೆ ಬೇಡಿಕೆ ಇದೆ. ವೈಜ್ಞಾನಿಕ ಕ್ರಮದಲ್ಲಿ ಮೀನು ಸಾಕಣೆ ಮಾಡಬೇಕು. ವೈಯಕ್ತಿಕವಾಗಿ ಮಾತ್ರವಲ್ಲದೆ ಸಂಘ, ಸಂಸ್ಥೆಗಳು ಕೂಡ ಮೀನು ಸಾಕಣೆ ಮಾಡಬಹುದು. ಇದರಿಂದ ಸಂಘಗಳ ಆರ್ಥಿಕ ಶಕ್ತಿ ಹೆಚ್ಚುತ್ತದೆ’ ಎಂದರು.

ADVERTISEMENT

‘ಹೆಬ್ಬಾಡಿ ಹುಂಡಿ ಗ್ರಾಮದ ಕೆರೆಗೆ ಕಾಟ್ಲಾ ಮತ್ತು ಜಿಲೇಬಿ ತಳಿಯ 5 ಸಾವಿರ ಮೀನಿನ ಮರಿಗಳನ್ನು ಬಿಡಲಾಗಿದೆ. ಮೇಳಾಪುರ ಸಂಜೀವಿನಿ ಸೂರ್ಯಕಾಂತಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟ ಮೀನುಗಳನ್ನು ಸಾಕಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದೆ. ಮೀನಿನ ಮರಿಗಳು ಕೊಕ್ಕರೆ, ನೀರುಕಾಗೆಗಳ ಪಾಲಾಗದಂತೆ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ನಿಗಾ ವಹಿಸಬೇಕು’ ಎಂದು ತಿಳಿಸಿದರು.

ತಾ.ಪಂ. ವ್ಯವಸ್ಥಾಪಕ ಮಾದೇಶ್, ಒಕ್ಕೂಟದ ಪದಾಧಿಕಾರಿಗಳಾದ ರೇಷ್ಮಾಬಾನು, ಜ್ಯೋತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.