ಶ್ರೀರಂಗಪಟ್ಟಣ: ಮಾಘ ಶುದ್ಧ ಹುಣ್ಣಿಮೆ ಪ್ರಯುಕ್ತ ಫೆ.24ರಂದು ನಿಮಿಷಾಂಬ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಸಹಸ್ರಾರು ಮಂದಿಯ ಮಾಘ ಸ್ನಾನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಫೆ.24ರ ರಾತ್ರಿ 1 ಗಂಟೆಯಿಂದಲೇ ಮಾಘ ಸ್ನಾನ ಆರಂಭವಾಗಲಿದ್ದು, ನದಿ ತೀರದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ನದಿಯಲ್ಲಿ ಸುಳಿ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಮಹಿಳೆಯರು ಬಟ್ಟೆ ಬದಲಿಸಲು ಕಿರು ಕೋಣೆಗಳು ಮತ್ತು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಕುಡಿಯುವ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಇರುತ್ತದೆ. 4 ಎಕರೆ ಜಮೀನಿನಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದಟ್ಟಣೆ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯ ತಂಡ ಕೂಡ ಇರುತ್ತದೆ.
ದೇವಾಲಯದಲ್ಲಿ ನಸುಕಿನ 3 ಗಂಟೆಗೆ ನಿಮಿಷಾಂಬ ದೇವಿಗೆ ಪಂಚಾಮೃತ ಅಭಿಷೇಕ ನೆರವೇರಲಿದ್ದು, ಬಳಿಕ ದರ್ಶನಕ್ಕೆ ಅವಕಾಶ ಇರುತ್ತದೆ. ಸಾಮೂಹಿಕ ದುರ್ಗಾ ಹೋಮ, ಸತ್ಯನಾರಾಯಣ ಪೂಜೆ. ಗಣ ಹೋಮ, ನಕ್ಷತ್ರ ಹೋಮ, ನವಗ್ರಹ ಹೋಮಗಳು ಜರಗಲಿವೆ.
ದೇಗುಲದ ಆವಣದಲ್ಲಿ ಶನಿವಾರ ಸಂಜೆ 4 ಗಂಟೆ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಭಕ್ತರಿಗೆ ಬೆಂಗಳೂರಿನ ಶ್ರೀಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ಪ್ರಸಾದ ವಿತರಿಸಲಿದೆ. ಸಂಜೆ 6 ಗಂಟೆಗೆ ಕಾವೇರಿ ಆರತಿ ನಡೆಯಲಿದೆ.
‘ಫೆ.24ರಂದು ನಿಮಿಷಾಂಬ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಸುಮಾರು 50 ಸಾವಿರ ಭಕ್ತರು ಮಾಘ ಸ್ನಾನ ಮಾಡಲಿದ್ದು, ಮಾಘ ಸ್ನಾನಕ್ಕೆಂದು ಕೆಆರ್ಎಸ್ ಜಲಾಶಯದಿಂದ ನದಿಗೆ 100 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.