ಶ್ರೀರಂಗಪಟ್ಟಣ: ಎರಡು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಗೆ ಪಟ್ಟಣದ ಐತಿಹಾಸಿಕ ಸೆಂದಿಲ್ ಕೋಟೆಯ ಒಂದು ಭಾಗ ಕುಸಿದಿದೆ.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸೆಂದಿಲ್ ಕೋಟೆ ಎರಡು ಕಡೆ ಕುಸಿದಿದೆ. ಕೋಟೆಯ ಪ್ರವೇಶ ದ್ವಾರದ ಎಡ ಭಾಗ ಮತ್ತು ಬಲ ಭಾಗದಲ್ಲಿ 10 ಮೀಟರ್ಗೂ ಹೆಚ್ಚು ಕುಸಿದಿದೆ. ಈ ಕೋಟೆಯ ಒಳ ಭಾಗದ ಎಡ ಪಾರ್ಶ್ವದ ಗೋಡೆಯೂ ನೆಲ ಕಚ್ಚಿದೆ. ಸೆಂದಿಲ್ ಕೋಟೆಯಲ್ಲಿ ಐದಾರು ಕಡೆ ಬಿರುಕು ಮೂಡಿವೆ.
ಆಳರಸರ ಕಾಲದಲ್ಲಿ ಶ್ರೀಗಂಧದ ಕೋಠಿಯಾಗಿದ್ದ ಸ್ಥಳ ಸೆಂದಿಲ್ ಕೋಟೆ ಎಂದು ಹೆಸರಾಗಿದ್ದು, ಸದ್ಯ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ. ಕೋಟೆಯ ಮೇಲೆ ಗಿಡ ಗಂಟಿಗಳು ಬೆಳೆದು ಕಲ್ಲಿನ ಕೋಟೆಯನ್ನು ಶಿಥಿಲಗೊಳಿಸಿವೆ. ಧಾರಾಕಾರ ಮಳೆಗೆ ಕೋಟೆ ಮೂರು ಕಡೆ ಕುಸಿತ ಕಂಡಿದ್ದು, ಉಳಿದ ಭಾಗವೂ ಕುಸಿಯುವ ಅಪಾಯ ಎದುರಾಗಿದೆ.
‘ಸೆಂದಿಲ್ ಕೋಟೆಗೆ ಮುನ್ನೂರು ವರ್ಷಗಳ ಇತಿಹಾಸ ಇದೆ. ಆದರೆ, ಪ್ರಾಚ್ಯವಸ್ತು ಇಲಾಖೆ ಈ ಸ್ಮಾರಕವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಕುಸಿತ ಕಂಡಿದೆ. ಹೀಗೆ ಬಿಟ್ಟರೆ ಕೋಟೆಯ ಉಳಿದ ಭಾಗವೂ ಕುಸಿದು ಬೀಳಲಿದೆ’ ಎಂದು ವಕೀಲ ಗಂಜಾಂನ ಜಿ.ಎನ್.ರವೀಶ್ ಕಳವಳ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.