ADVERTISEMENT

ಮಂಡ್ಯ: ತಮಿಳು ಕಾಲೊನಿಯಲ್ಲಿ ಮನೆ–ಮನೆ ಸರ್ವೆ

ಫೆ.3ರಂದು ನ್ಯಾಯಾಲಯದಲ್ಲಿ ವಿಚಾರಣೆ: 498 ಮನೆಗಳ ಸರ್ವೆ ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:47 IST
Last Updated 29 ಜನವರಿ 2026, 6:47 IST
ಮಂಡ್ಯ ನಗರದ ಮಿಮ್ಸ್‌ ಆಸ್ಪತ್ರೆ ಆವರಣಕ್ಕೆ ಹೊಂದಿಕೊಂಡಿರುವ ತಮಿಳು ಕಾಲೊನಿಯಲ್ಲಿ ನಗರಸಭೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಮನೆ–ಮನೆ ಸರ್ವೆ ನಡೆಸಿದರು 
ಮಂಡ್ಯ ನಗರದ ಮಿಮ್ಸ್‌ ಆಸ್ಪತ್ರೆ ಆವರಣಕ್ಕೆ ಹೊಂದಿಕೊಂಡಿರುವ ತಮಿಳು ಕಾಲೊನಿಯಲ್ಲಿ ನಗರಸಭೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಮನೆ–ಮನೆ ಸರ್ವೆ ನಡೆಸಿದರು    

ಮಂಡ್ಯ: ಇಲ್ಲಿಯ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆವರಣಕ್ಕೆ ಹೊಂದಿಕೊಂಡಂತಿರುವ ತಮಿಳು ಕಾಲೊನಿಯಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ನಗರಸಭೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಮನೆ–ಮನೆ ಸರ್ವೆ ನಡೆಸಿದರು.

ತಮಿಳು ಕಾಲೊನಿ ಜಾಗದ ವಿವಾದದ ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಫೆ.3ರಂದು ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಅವರ ಸೂಚನೆಯಂತೆ ಮಂಗಳವಾರ ಮತ್ತು ಬುಧವಾರ ಎರಡೂ ದಿನ ಅಧಿಕಾರಿಗಳು ಮನೆ– ಮನೆಗೆ ತೆರಳಿ ಸರ್ವೆ ನಡೆಸಿದರು. ಕುಟುಂಬದವರ ದಾಖಲೆ ಹಾಗೂ ಮಾಹಿತಿ ಸಂಗ್ರಹಿಸಿದರು.

ಸುಮಾರು 14 ಎಕರೆ ಜಮೀನು ತೆರವು ಸಂಬಂಧ ಈಗಾಗಲೇ ತಮಿಳು ನಿವಾಸಿಗಳು ಹಾಗೂ ಜಿಲ್ಲಾಡಳಿತದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಮಂಗಳವಾರ ಸರ್ವೆ ನಡೆಸುವಾಗ ತಮಿಳು ಕಾಲೊನಿ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರು. ಆಗ ಜಿಲ್ಲಾಧಿಕಾರಿ ಸೂಚನೆಯಂತೆ ಸರ್ವೆಗೆ ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ನಿವಾಸಿಗಳು ಸರ್ವೆ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.

ADVERTISEMENT

2018ರಲ್ಲೇ ನ್ಯಾಯಾಲಯಕ್ಕೆ ಪಟ್ಟಿ ಸಲ್ಲಿಸಲಾಗಿದೆ. 1991ರಿಂದಲೂ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದೀಗ ಫೆ.3ರಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವುದರಿಂದ ತರಾತುರಿಯಲ್ಲಿ ಅರ್ಹ ಫಲಾನುಭವಿಗಳ ಬಿಟ್ಟು ಇಲ್ಲದೆ ಇರುವವರ ಮನೆ, ಗುಡಿಸಲು, ಜಾನುವಾರು ಶೆಡ್‌ಗಳಿಗೂ ನಂಬರ್ ಹಾಕಿ ಸರ್ವೆ ನಡೆಸಿ ಹೆಚ್ಚುವರಿ ವಾಸವಿದ್ದಾರೆ ಎಂದು ತೋರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

‘ಜಿಲ್ಲಾಧಿಕಾರಿ ಸೂಚನೆಯಂತೆ ತಮಿಳು ಕಾಲೊನಿಗೆ ಭೇಟಿ ನೀಡಿ ಮನೆ– ಮನೆಗೆ ತೆರಳಿ ಸರ್ವೆ ನಡೆಸಿ ವಾಸಿಸುತ್ತಿರುವ ಕುಟುಂಬದವರ ಮಾಹಿತಿ, ದಾಖಲೆ ಸಂಗ್ರಹಿಸಿದ್ದೇವೆ. ಎರಡು ದಿನಗಳಿಂದ ಸಂಪೂರ್ಣ ಸರ್ವೆ ನಡೆಸಲಾಗಿದೆ. ಇದುವರೆಗೂ 498 ಮನೆಗಳ ಸರ್ವೆ ನಡೆಸಿ ದಾಖಲೆ ಸಂಗ್ರಹಿಸಲಾಗಿದೆ’ ಎಂದು ಮಂಡ್ಯ ನಗರಸಭೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. 

ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ

ಸರ್ವೆಗೆ ತೆರಳಿದ ಅಧಿಕಾರಿಗಳು ಹಾಗೂ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಪರಿಸ್ಥಿತಿ ನಿಭಾಯಿಸಿದರು. ಆದರೆ ನಿವಾಸಿಗಳು ಸರ್ವೆಗೆ ಬಂದಿರುವ ಅಧಿಕಾರಿಗಳು ವಾಸವಿಲ್ಲದ ಮನೆ ಗುಡಿಸಲು ಜಾನುವಾರು ಕಟ್ಟುವ ಗುಡಿಸಲುಗಳಿಗೂ ನಂಬರ್ ಹಾಕುವ ಮೂಲಕ ಲೆಕ್ಕ ಹಾಕುತ್ತಿದ್ದಾರೆ ಎಂದು ದೂರಿದರು. ‘ನಾಲ್ಕು ದಿನಗಳ ಹಿಂದೆ ಜಿಲ್ಲಾಧಿಕಾರಿ ಕುಮಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಹಿಂದೆ 524 ಫಲಾನುಭವಿಗಳು ಇದ್ದಾರೆ ಎಂದು ವರದಿ ನೀಡಲಾಗಿದೆ. ಅದರಂತೆ ಫಲಾನುಭವಿಗಳ ಮನೆ ಕುಟುಂಬದ ವಿವರ ಸಂಗ್ರಹಿಸುವಂತೆ ಸೂಚಿಸಿದ್ದರು. ಆದರೆ ಅಧಿಕಾರಿಗಳು ವಾಸವಿಲ್ಲದ ಮನೆಯನ್ನು ಸರ್ವೆಗೆ ಒಳಪಡಿಸುತ್ತಿದ್ದಾರೆ. ಅಲ್ಲದೆ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮನಬಂದಂತೆ ಸರ್ವೆ ನಡೆಸುತ್ತಿದ್ದಾರೆ’ ಎಂದು ನಿವಾಸಿ ವೆಂಕಟೇಶ್ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.