ಶ್ರೀರಂಗಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ 12 ನಿರ್ದೇಶಕ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ’ಬಿ’ ವರ್ಗದ 8 ಸ್ಥಾನಗಳಲ್ಲಿ ಜೆಡಿಎಸ್ ಹಾಗೂ ’ಎ’ ವರ್ಗದ 4 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಜಯಗಳಿಸಿದರು.
’ಬಿ’ ವರ್ಗದಿಂದ ಜೆಡಿಎಸ್ ಬೆಂಬಲಿತ ಎಸ್.ಎಲ್. ದಿವಾಕರ್, ಎಂ. ನಂದೀಶ್, ಎನ್.ವಿ. ಕಾಂತಾಮಣಿ, ಲಕ್ಷ್ಮೀದೇವಮ್ಮ, ವಿ. ಜಯರಾಜ್, ಶ್ರೀಕಂಠ, ಜಿ.ಪಿ. ಲಕ್ಷ್ಮಣ ಮತ್ತು ನಾಗರಾಜು ಆಯ್ಕೆಯಾಗಿದ್ದಾರೆ. ’ಎ’ ವರ್ಗದಿಂದ ಕಾಂಗ್ರೆಸ್ ಬೆಂಬಲಿತ ಕೆ. ಕೃಷ್ಣ, ಎಂ.ಸಿ. ಮೋಹನಕುಮಾರ್, ಎಸ್.ಎನ್. ರಾಮಲಿಂಗೇಗೌಡ ಹಾಗೂ ಎಂ.ಎಸ್. ವಿಜಯಕುಮಾರ್ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಸಂಭ್ರಮ: ಎಲ್ಲ 8 ಸ್ಥಾನಗಳಲ್ಲಿ ಜೆಡಿಎಸ್ ಜಯಗಳಿಸಿದ ಹಿನ್ನೆಲೆಯಲ್ಲಿ ವಿಜೇತರು ಮತ್ತು ಅವರ ಬೆಂಬಲಿಗರು ಟಿಎಪಿಸಿಎಂಎಸ್ ಕಚೇರಿ ಎದುರು ಗುರುವಾರ ಸಂಭ್ರಮ ಆಚರಿಸಿದರು. ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಜೆಡಿಎಸ್, ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಹಾಗೂ ರವೀಂದ್ರ ಶ್ರೀಕಂಠಯ್ಯ ಪರ ಘೋಷಣೆ ಕೂಗಿದರು.
ಆಡಳಿತ ಮಂಡಳಿ ಬದಲಾಗಬೇಕೆಂದು ಸದಸ್ಯರು ಬಯಸಿದ್ದರು. ಚುನಾವಣಾಧಿಕಾರಿ ವಿರುದ್ಧವಾಗಿ ನಡೆದುಕೊಂಡರೂ ನ್ಯಾಯಾಲಯದಿಂದ ಆದೇಶ ತಂದು ಚನಾವಣೆಯಲ್ಲಿ ಗೆದ್ದಿದ್ದೇವೆ. ಪಕ್ಷ ವರಿಷ್ಠ ಎಚ್.ಡಿ. ದೇವೇಗೌಡ, ನಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ, ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ ಅವರ ನಾಯಕತ್ವಕ್ಕೆ ಮನ್ನಣೆ ಸಿಕ್ಕಿದೆ. ಸಂಘದ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ನೂತನ ನಿರ್ದೇಶಕ ಎಂ. ನಂದೀಶ್ ಹೇಳಿದರು.
ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎನ್. ವೆಂಕಟೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ಎನ್. ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ. ಸ್ವಾಮಿಗೌಡ, ನಗರ ಘಟಕದ ಅಧ್ಯಕ್ಷ ಎಂ. ಸುರೇಶ್, ಮುಖಂಡರಾದ ಗಂಜಾಂ ಕೃಷ್ಣಪ್ಪ, ರಾಮಕೃಷ್ಣ, ಎಸ್. ಪ್ರಕಾಶ್, ಎಸ್.ಟಿ. ರಾಜು, ಕಾಯಿ ವೆಂಕಟೇಶ್, ಸಾಯಿಕುಮಾರ್, ಬಿ.ಎಸ್. ಸಂದೇಶ್, ತಿಲಕ್ ಕುಮಾರ್, ಎಪಿಎಂಸಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.