ADVERTISEMENT

ಮಠದಿಂದ ತಂತ್ರಜ್ಞಾನ, ವಿಜ್ಞಾನ ಕಲಿಕೆ: ಡಿ.ವಿ.ಸದಾನಂದಗೌಡ

ಆದಿಚುಂಚನಗಿರಿ ಮಠದಲ್ಲಿ ವಿಜ್ಞಾತಂ ಪ್ರಶಸ್ತಿ ಪ್ರದಾನ; ವಿಜ್ಞಾತಂ ಸಂಚಯ-4 ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:37 IST
Last Updated 21 ಫೆಬ್ರುವರಿ 2026, 6:37 IST
   

ನಾಗಮಂಗಲ: ಶಾಲಾ ಕಾಲೇಜು ಹಂತದಲ್ಲಿ ವಿಜ್ಞಾನ, ತಂತ್ರಜ್ಞಾನದಂತಹ ಪ್ರಾಯೋಗಿಕ ಶಿಕ್ಷಣ ಕಲಿಸುವುದು ವಿದ್ಯಾರ್ಥಿಗಳಿಗೆ ಮುಖ್ಯವಾಗಿದ್ದು, ಅ ನಿಟ್ಟಿನಲ್ಲಿ ಆದಿಚಂಚುನಗಿರಿ ಮಠ ಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕದ 13ನೇ ವರ್ಷದ ಅಂಗವಾಗಿ ಶುಕ್ರವಾರ ನಡೆದ ‘ವಿಜ್ಞಾತಂ–2026’ ಕಾರ್ಯಕ್ರಮದಲ್ಲಿ ವಿಜ್ಞಾತಂ ಸಂಚಯ-4 ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಇಂದಿನ ಯುವ ಪೀಳಿಗೆಯನ್ನು ತಂತ್ರಜ್ಞಾನದ ವೇಗಕ್ಕೆ ಪ್ರೇರೇಪಿಸಬೇಕಿದೆ. ಮನುಷ್ಯ ಜಗತ್ತಿನ ವೇಗದ ಜೊತೆ ಬೆಳೆಯಬೇಕು. ಇಲ್ಲದಿದ್ದರೆ ಹಿಂದುಳಿಯುವ ಸಾಧ್ಯತೆ ಹೆಚ್ಚು. ಪ್ರಸ್ತುತದಲ್ಲಿ ಅನೇಕ ತಂತ್ರಜ್ಞಾನದ ಹತ್ತು ಹಲವು ಅಂಶಗಳು ನಮ್ಮ‌ ಪುರಾಣಗಳಲ್ಲಿ ವೇದ್ಯವಾಗಿದ್ದು, ಅದು ಗುರು ಪರಂಪರೆಯಲ್ಲಿ ‌ಇಂದಿಗೂ ಮುಂದುವರೆಯುತ್ತಿರುವುದು‌ ಸಂತಸದ ಸಂಗತಿ’ ಎಂದು ಶ್ಲಾಘಿಸಿದರು.

ADVERTISEMENT

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ಆಧ್ಯಾತ್ಮಿಕ ಧಾರ್ಮಿಕ ನೆಲೆಗಟ್ಟಿನ ಮಠವಾದರೂ ವಿಜ್ಞಾನ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ಪೂರಕ ಶಕ್ತಿಯಾಗಿ ನಿಂತು ಆಯೋಜಿಸಿರುವ ಇಂತಹ ಕಾರ್ಯಕ್ರಮಗಳು ಬೇರೆ ಯಾವುದೇ ಮಠಗಳಿಂದಲೂ ಸಾಧ್ಯವಾಗುತ್ತಿಲ್ಲ. ಮಂಡ್ಯ ಸಾತನೂರು ವ್ಯಾಪ್ತಿಯಲ್ಲಿ ಶ್ರೀಮಠದ ವತಿಯಿಂದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶಯದಂತೆ ಒಂದು ಪಶು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಯೋಜನೆ ರೂಪುಗೊಂಡಿದೆ’ ಎಂದು ತಿಳಿಸಿದರು.

ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಬಾಲಗಂಗಾಧರನಾಥ ಸ್ವಾಮೀಜಿ ಅವರ ಚಿಂತನೆಗಳನ್ನು ನಿರ್ಮಲಾನಂದನಾಥ ಶ್ರೀಗಳು ಸಾಕಾರಗೊಳಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಎಲ್ಲ ಜಾತಿ ಧರ್ಮದ ಮಕ್ಕಳಿಗೆ ಆಶ್ರಯ ನೀಡುತ್ತಿರುವ ಮಠದ ಕಾರ್ಯ ಶ್ಲಾಘನೀಯ’ ಎಂದರು.

₹5 ಲಕ್ಷ, ಪ್ರಶಸ್ತಿ ಫಲಕದೊಂದಿಗೆ ವಿಜ್ಞಾತಂ ಪ್ರಶಸ್ತಿಯನ್ನು ವಿಜ್ಞಾನಿ ಎಂ.ಕೆ.ಸೂರಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಆಶೀರ್ವಚನ ನೀಡಿದರು. ವಿಜ್ಞಾತಂ ಉತ್ಸವದ ಅಂಗವಾಗಿ ಐದು ವಿಭಾಗಗಳಲ್ಲಿ ಆಯೋಜಿಸಿದ್ದ ವಿಜ್ಞಾನ ತಂತ್ರಜ್ಞಾನ ವಸ್ತು ಪ್ರದರ್ಶನ ಹಾಗೂ ನೃತ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ .ಮಂಜು, ಮಾಜಿ ಶಾಸಕ ಕೆ. ಸುರೇಶಗೌಡ,  ಮಠದ ಪ್ರಸನ್ನನಾಥ ಸ್ವಾಮೀಜಿ, ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಪ್ರಕಾಶನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಅಮೇರಿಕಾದ ಬಾಬು ಕೀಲಾರ, ಅಕ್ಕ ಸಮ್ಮೇಳನದ ರೂವಾರಿ ಡಾ.ಅಮರನಾಥಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.