ಕೆ.ಆರ್.ಪೇಟೆ: ‘ಸಾಂಕ್ರಾಮಿಕವಲ್ಲದ ರೋಗಗಳಿಂದ (ಎನ್ಸಿಡಿ) ಜನರನ್ನು ರಕ್ಷಿಸುವುದು ದೊಡ್ಡ ಸವಾಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧನಂಜಯ ಹೇಳಿದರು.
ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಮಾತನಾಡಿದರು.
‘ಸಾಂಕ್ರಾಮಿಕ ರೋಗಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಸಾಂಕ್ರಾಮಿಕವಲ್ಲದ ರೋಗಗಳಾದ ಹೃದ್ರೋಗ, ಕ್ಯಾನ್ಸರ್, ಬಿಪಿ, ಮಧುಮೇಹ ಸಮಸ್ಯೆ ಸೇರಿದಂತೆ ಹಲವು ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಈ ರೋಗಗಳು ಯಾವ ಸೂಚನೆಯನ್ನೂ ನೀಡದೆ ಬಲಿ ಪಡೆಯುತ್ತವೆ. ಹೀಗಾಗಿ, ಪ್ರತಿಯೊಬ್ಬರೂ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 38 ಮಂದಿ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನೇಮಿಸಿ ಜನರಿಗೆ ಮನೆ ಬಾಗಿಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ತಾಲ್ಲೂಕಿಗೆ ಹೊಸದಾಗಿ ಎಂ.ಸಿ.ಎಚ್ (ತಾಯಿ ಮತ್ತು ಮಗುವಿನ) ಆಸ್ಪತ್ರೆ ಮಂಜೂರಾಗಿದ್ದು, ಶೀಘ್ರದಲ್ಲೇ ಕಾರ್ಯ ನಿರ್ವಹಿಸಲಿದೆ’ ಎಂದರು.
ತಹಶೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ‘ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ. ಪ್ರತಿಯೊಬ್ಬರೂ ನಿಯಮಿತ ವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳ ಬೇಕು’ ಎಂದು ಸಲಹೆ ನೀಡಿದರು.
ಪುರಸಭಾ ಅಧ್ಯಕ್ಷೆ ಮಹಾದೇವಿ ನಂಜುಂಡ, ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿದರು.
ಆರೋಗ್ಯ ಮೇಳಕ್ಕೆ ಜಿಲ್ಲಾಧಿಕಾರಿ ಡಾ. ಅಶ್ವತಿ ಭೇಟಿ ನೀಡಿ ಪರಿಶೀಲಿಸಿದರು. ಪುರಸಭಾ ಸದಸ್ಯರಾದ ಶಾಮಿಯಾನ ತಿಮ್ಮೇಗೌಡ , ಶುಭಾ ಗಿರೀಶ್, ಮುಖ್ಯಾಧಿಕಾರಿ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರವಿ , ವೈದ್ಯರಾದ ಶಶಿಧರ್, ಡಾ.ಭವಾನಿ, ಡಾ.ಆಶಾಲತಾ, ಡಾ.ಅಶ್ವಥ್, ಡಾ ಅರುಣಾನಂದ, ತಂಬಾಕು ನಿಯಂತ್ರಣ ಕೋಶದ ತಿಮ್ಮರಾಜು, ಸಿಡಿಪಿಒ ಅರುಣ್ ಕುಮಾರ್, ಆಹಾರ ಸುರಕ್ಷಿತ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಬೆಟ್ಟಸ್ವಾಮಿ, ಎಚ್.ನಾಗರಾಜು, ಆಯುಷ್ ವೈದ್ಯರಾದ ಡಾ.ಯೋಜನ್, ಡಾ.ದರ್ಶನ್, ಡಾ.ಲೋಕೇಶ್, ಡಾ. ದಿವ್ಯಾ, ಡಾ.ಶ್ರೀನಿವಾಸ್, ಹಿರಿಯ ಆರೋಗ್ಯ ಪರಿವೀಕ್ಷಕರಾದ ಶೀಳನೆರೆ ಸತೀಶ್, ಧರ್ಮೇಂದ್ರ , ಸಚಿವರ ಆಪ್ತ ಸಹಾಯಕ ಮಂಜುನಾಥ್ ಗೌಡ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.