ADVERTISEMENT

ಗಗನಚುಕ್ಕಿಗೆ ಜೀವ ಕಳೆತಂದ ಮಳೆರಾಯ; ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 12:51 IST
Last Updated 30 ಜುಲೈ 2023, 12:51 IST
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ(ಬ್ಲಪ್) ಬಳಿಯ ಗಗನಚುಕ್ಕಿ ಜಲತಾಪ ವೀಕ್ಷಣೆಗೆ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿದೆ
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ(ಬ್ಲಪ್) ಬಳಿಯ ಗಗನಚುಕ್ಕಿ ಜಲತಾಪ ವೀಕ್ಷಣೆಗೆ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿದೆ   

ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರದ (ಬ್ಲಪ್) ಬಳಿಯ ಅವಳಿ ಜಲಪಾತಗಳಾದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ಈ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಾನುವಾರ ಪ್ರವಾಸಿಗರ ದಂಡು ಹರಿದು ಬಂದಿತ್ತು.

ಬಹುತೇಕ ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿ ಅವಳಿ ಜಲಪಾತಗಳು ಮೈತುಂಬಿ ಹರಿಯುವಂತೆ ಮಾಡುತ್ತಿದ್ದವು. ಆದರೆ ಪ್ರಸ್ತುತ ವರ್ಷ ಪೂರ್ವ ಮುಂಗಾರು ಕೈಕೊಟ್ಟಿದ್ದರಿಂದ ಕಳೆದ 15 ದಿನದ ಹಿಂದೆ ಬರಿದಾಗಿದ್ದ ಜಲಪಾತಗಳಿಗೆ ಕೆಲ ದಿನಗಳಿಂದ ಕಾವೇರಿ ಜಲಾನಯ ಪ್ರದೇಶಗಳಲ್ಲಿ ಸುರಿದ ನಿರಂತರ ಮಳೆ ಜೀವ ಕಳೆ ತುಂಬಿದೆ.

ನೀರಿಲ್ಲದೆ ಬಣಗುಡುತ್ತಿದ್ದ ಜಲಪಾತಗಳು ಇದೀಗ ದುಮ್ಮಿಕ್ಕಿ ಹರಿಯುತ್ತಿವೆ. ಕಾವೇರಿ ಮತ್ತು ಕಪಿಲಾ ನದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವಿರುವುದರಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಲ್ಲಿ ನೀರು ಬೋರ್ಗರೆಯುವ ದೃಶ್ಯ ವೈಭವವನ್ನು ಸವಿಯಲು ನೆರೆಯ ತಮಿಳುನಾಡು, ಕೇರಳ, ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರ ದಂಡೇ ಜಲಪಾತ ವೀಕ್ಷಣೆಗೆ ಹರಿದು ಬರುತ್ತಿದೆ.

ADVERTISEMENT

ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ದೃಶ್ಯ, ಗುಂಪು ಗುಂಪಾಗಿ ನಿಂತು ಫೋಟೊ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.