ಮದ್ದೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಾರ್ಯ ಬಾಹುಳ್ಯದಿಂದಾಗಿ ಗ್ರಾಮ ಲೆಕ್ಕಿಗರೊಬ್ಬರು ತಾಲ್ಲೂಕು ಕಚೇರಿಯಲ್ಲೇ ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಎಸ್.ಐ.ಹೊನ್ನಲಗೆರೆ ಗ್ರಾಮದ ಲೆಕ್ಕಿಗ ಗೋವಿಂದಶೆಟ್ಟಿ (45) ಆತ್ಮಹತ್ಯೆಗೆ ಯತ್ನಿಸಿದವರು. ಕಿಸಾನ್ ಸಮ್ಮಾನ್ ಯೋಜನೆ ಜಾರಿಯಲ್ಲಿ ಫಲಾನುಭವಿಗಳಿಂದ ದಾಖಲಾತಿ ಪಡೆದು ಕಂಪ್ಯೂಟರ್ಗೆ ದಾಖಲಿಸುವ ಕಾರ್ಯ ಜಿಲ್ಲೆಯಾದ್ಯಂತ ಭರದಿಂದ ಸಾಗುತ್ತಿದೆ. ಕೆಲಸದ ಒತ್ತಡದಿಂದ ಬೇಸತ್ತು ಗೋವಿಂದ ಶೆಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಸ್ವಸ್ಥಗೊಂಡಿದ್ದ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು.
ನಾಳೆ, ನಾಡಿದ್ದು ರಜೆ ಇಲ್ಲ: ಕಿಸಾನ್ ಸಮ್ಮಾನ್ ಯೋಜನೆಗೆ ದಾಖಲಾತಿ ಪಡೆಯಲು ಶನಿವಾರ ಮತ್ತು ಭಾನುವಾರ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಕೃಷಿ, ಕಂದಾಯ ಇಲಾಖೆ ಸಿಬ್ಬಂದಿ ಹಳ್ಳಿಗಳಿಗೆ ತೆರಳಿ ರೈತರ ಜಮೀನು ಘೋಷಣಾ ಪತ್ರ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 22 ನಾಲ್ಕನೇ ಶನಿವಾರ, ಜೂನ್ 23 ಭಾನುವಾರದ ರಜೆ ದಿನಗಳು ಕೂಡ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.