ADVERTISEMENT

‘ಅಮಾಯಕರ ಮೇಲಿನ ಪ್ರಕರಣ ಕೈಬಿಡಿ’: ಮೂಡನಹಳ್ಳಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

ಕೆ.ಆರ್.ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 4:55 IST
Last Updated 9 ನವೆಂಬರ್ 2021, 4:55 IST
ಕೆ.ಆರ್.ಪೇಟೆ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಮೂಡನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ನಿರಪರಾಧಿಗಳ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಿದರು
ಕೆ.ಆರ್.ಪೇಟೆ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಮೂಡನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ನಿರಪರಾಧಿಗಳ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಿದರು   

ಕೆ.ಆರ್.ಪೇಟೆ: ಅಕ್ಕಿಹೆಬ್ಬಾಳು ಹೋಬಳಿ ಮೂಡನಹಳ್ಳಿಯಲ್ಲಿ ವ್ಯಕ್ತಿಯೊಬ್ಬರ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ಅಮಾಯಕರ ಹೆಸರು ಸೇರಿಸಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಪಟ್ಟಣದ ಪ್ರವಾಸಿಮಂದಿರ ವೃತ್ತದಿಂದ ಮೆರವಣಿಗೆ ಮೂಲಕ ಠಾಣೆಗೆ ತೆರಳಿದ ಮೂಡನಹಳ್ಳಿ, ಆಲೇನಹಳ್ಳಿ, ಹೊನ್ನೇನಹಳ್ಳಿ, ಬಂಡಿಹೊಳೆ, ಬೀರುವಳ್ಳಿ ಗ್ರಾಮಸ್ಥರು ಸಮಗ್ರ ತನಿಖೆ ನಡೆಸಬೇಕು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣದ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಮನು, ಮುಖಂಡರಾದ ಆಲೇನಹಳ್ಳಿ ಶಿವರಾಮು, ಮೂಡನಹಳ್ಳಿ ಶಿವು, ‘ಗ್ರಾಮದ ಶೇಖರ್ ಅವರ ಪುತ್ರ ರಘು ಪೆಟ್ರೋಲ್ ಸುರಿದುಕೊಂಡು ಕಳೆದ ತಿಂಗಳು ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ADVERTISEMENT

ಇದನ್ನು ಕೊಲೆ ಎಂದು ಬಿಂಬಿಸಿರುವ ರಘುವಿನ ಕುಟುಂಬದವರು ರಘುವಿನ ಚಿಕ್ಕಪ್ಪ ಮಹೇಂದ್ರ ಅವರ ಮಗ ಶಿವು ಹಾಗೂ ಕೆಲಸಕ್ಕಿರುವ ಬಾಬು ಎಂಬವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಅದರಂತೆ ಶಿವು ಮತ್ತು ಬಾಬು ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಆದರೆ, ಇಬ್ಬರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ, ಪೊಲೀಸರು ತನಿಖೆ ನಡೆಸದೆ ಅಮಾಯಕರನ್ನು ಬಲಿಪಶು ಮಾಡುತ್ತಿದ್ದಾರೆ. ಶಿವು ಮತ್ತು ಬಾಬು ಅವರನ್ನು ಕೈಬಿಟ್ಟು ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಎಸ್.ಐ.ಪ್ರಮೋದ್, ಗ್ರಾಮಸ್ಥರ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು ಎಂದರು.

ಬಂಡಿಹೊಳೆ ಶಿವರಾಮು, ಕ್ಯಾತನಹಳ್ಳಿ ರಾಮಣ್ಣ, ಮಂಜುಳಾ, ಬಾಬು, ಯಶೋಧಮ್ಮ ಮಧು, ತಿಮ್ಮೇಗೌಡ, ಪ್ರಭಾಕರ್, ಕೃಷ್ಣೇಗೌಡ, ಮಹೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.