ಮಳವಳ್ಳಿ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ‘ವೋಟ್ ಚೋರಿ ಅಭಿಯಾನ’ವನ್ನು ಬೆಂಬಲಿಸಿ ಸಾರ್ವಜನಿಕರಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸಹಿ ಸಂಗ್ರಹಿಸಿದರು
ಮಳವಳ್ಳಿ: ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ಮರೆತರೆ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉಳಿಗಾಲವಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಅನಂತ್ರಾಂ ವೃತ್ತದಲ್ಲಿ ‘ವೋಟ್ ಚೋರಿ ಅಭಿಯಾನ’ ಬೆಂಬಲಿಸಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಚುನಾವಣೆಗೆ ಮೂರು ತಿಂಗಳ ಮೊದಲೇ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಮತ್ತೊಂದೆಡೆ ಹೆಚ್ಚಿನ ಹೆಸರುಗಳು ದಿಢೀರ್ ಅಂತ ಸೇರ್ಪಡೆಗೊಳ್ಳುತ್ತವೆ. ಮತದಾರರ ಪಟ್ಟಿಯ ಮೂಲ ಲಭ್ಯತೆಯನ್ನು ನೀಡದ ರೀತಿಯಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜನರಲ್ಲಿ ಅರಿವು ಮೂಡಿಸಲು ದೇಶದೆಲ್ಲಡೆ ವೋಟ್ ಚೋರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ವೋಟ್ ಚೋರಿ ಅಭಿಯಾನಕ್ಕೆ ಮಮತಾ ಬ್ಯಾನರ್ಜಿ, ಸ್ಟಾಲಿನ್ ಸೇರಿದಂತೆ ಅನೇಕರು ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಬಿಹಾರದ ಜನರು ಸತ್ಯವನ್ನು ಅರಿತು ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾರೆ. ಬಿಹಾರದ ಹೆಬ್ಬಾಗಿಲಿನ ಮೂಲಕ ರಾಷ್ಟ್ರದಲ್ಲಿ ಹೊಸ ಕ್ರಾಂತಿ ನಡೆಸಲಿದೆ’ ಎಂದು ಭವಿಷ್ಯ ನುಡಿದರು.
ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಅಭಿಯಾನ ನಡೆಯಲಿದ್ದು, ಪ್ರತಿ ಪಂಚಾಯತಿಯಲ್ಲಿ ಎರಡು ಸಾವಿರ ಸಹಿ ಸಂಗ್ರಹಿಸಲಾಗುವುದು. ಚುನಾವಣಾ ಆಯೋಗದ ತಪ್ಪುಗಳನ್ನು ಸರಿಪಡಿಸಿ ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಹೇಳಿದರು.
ವಿವಿಧೆಡೆ ತೆರಳಿದ್ದ ಶಾಸಕರು ಜನರಿಂದ ಸಹಿ ಸಂಗ್ರಹಿಸಿದರು. ಮನ್ಮುಲ್ ನಿರ್ದೇಶಕರಾದ ಆರ್.ಎನ್. ವಿಶ್ವಾಸ್, ಡಿ.ಕೃಷ್ಣೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಲಿಂಗಯ್ಯ, ಕಾಂಗ್ರೆಸ್ ಉಸ್ತುವಾರಿ ಅಜ್ಜಹಳ್ಳಿ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಬಿ.ಪುಟ್ಟಬಸವಯ್ಯ, ಮನು, ಎಂ.ಮಾದಯ್ಯ, ದಿಲೀಪ್ ಕುಮಾರ್, ಪುರಸಭೆ ಸದಸ್ಯ ನೂರುಲ್ಲಾ, ಮುಖಂಡರಾದ ಬಂಕ್ ಮಹದೇವು, ಚೌಡಪ್ಪ, ಸುರೇಶ್, ಮಾದೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.