ಮಂಡ್ಯ: ‘ಕನ್ನಂಬಾಡಿ ಅಣೆಕಟ್ಟೆ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ನೀರು ಹರಿಸಲು ಸರ್ಕಾರ ವಿಫಲವಾಗಿದೆ. ಆದರೆ, ಜೂನ್ ತಿಂಗಳಲ್ಲಿ ಬಾಗಿನ ಅರ್ಪಣೆಯ ಶಿಲಾನ್ಯಾಸ ನೆರವೇರಿಸಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ’ ಎಂದು ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರ ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೇ ತಿಂಗಳಲ್ಲಿ ಅಣೆಕಟ್ಟೆಯಲ್ಲಿ ಸುಮಾರು 95 ಅಡಿ ನೀರು ಶೇಖರಣೆ ಆಗಿದ್ದರೂ ಒಂದು ಕಟ್ಟು ನೀರು ಹರಿಸದೇ ಭತ್ತದ ಇಳುವರಿ ಕುಂಠಿತವಾಗಲು ಕಾರಣವಾದ ಕೃಷಿ ಸಚಿವರು ಈ ಬಗ್ಗೆ ಮೌನವಾಗಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಕೃಷಿ ಸಚಿವರ ತವರಿನಲ್ಲೇ ರೈತ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಶೇ 30ರಷ್ಟು ಭತ್ತದ ಇಳುವರಿ ಕಡಿಮೆಯಾಗಿದೆ. ಕಬ್ಬು ಸೇರಿ ಇತರೆ ಬೆಳೆಗಳು ಒಣಗುತ್ತಿದ್ದರೂ ನೀರು ಹರಿಸದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ಹೊರ ಹಾಕಿದರು.
ಭತ್ತ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ನಿರಾಸಕ್ತಿ ತೋರಿರುವುದು ಸರಿಯಲ್ಲ. ಬೆಲೆ ಕುಸಿತ ಹಾಗೂ ಇಳುವರಿ ನಷ್ಟದಿಂದ ರೈತರು ಪರಿತಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ ₹2300 ಬೆಂಬಲ ಬೆಲೆ ನೀಡಿ ಭತ್ತ ಖರೀದಿಗೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯದೇ ಕ್ವಿಂಟಲ್ ಭತ್ತ ಕೇವಲ ₹1800ರಿಂದ ₹1900ಗೆ ಮಾರಾಟವಾಗುತ್ತಿದ್ದು, ನಷ್ಟಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
‘ದುಬಾರಿ ವೆಚ್ಚದ ಆರತಿಗೆ ವಿರೋಧವಿದೆ’
ಕಾವೇರಿ ಆರತಿಗೆ ನನ್ನ ವಿರೋಧವಿಲ್ಲ. ಆದರೆ, ₹92 ಕೋಟಿ ವೆಚ್ಚದಲ್ಲಿ ಅಣೆಕಟ್ಟೆಯ ಸನಿಹದಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವುದು ಯಾರನ್ನು ಮೆಚ್ಚಿಸಲು ಎಂದು ರವೀಂದ್ರ ಶ್ರೀಕಂಠಯ್ಯ ಅತೃಪ್ತಿ ಹೊರ ಹಾಕಿದರು. ಕಾವೇರಿ ಆರತಿಗೆ ಶ್ರೀರಂಗಪಟ್ಟಣ ಬಳಿ ಇರುವ ಸ್ನಾನಘಟ್ಟ ಸೂಕ್ತ ಪ್ರದೇಶವಾಗಿದ್ದು ನಾನು ಶಾಸಕನಾಗಿದ್ದ ವೇಳೆ ₹8 ಕೋಟಿ ಅನುದಾನದಲ್ಲಿ ಮೆಟ್ಟಿಲುಗಳ ನವೀಕರಣ ಮಾಡಲಾಗಿದೆ. ಆ ಸ್ಥಳದಲ್ಲಿ ಕಡಿಮೆ ವೆಚ್ಚದಲ್ಲಿ ಕಾವೇರಿ ಆರತಿ ಧಾರ್ಮಿಕ ಕಾರ್ಯ ಮಾಡಿದರೆ ಅಣೆಕಟ್ಟೆಯ ಸುರಕ್ಷತೆ ಜೊತೆಗೆ ಶ್ರೀರಂಗಪಟ್ಟಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.