ಶಾಸಕ ಪಿ.ರವಿಕುಮಾರ್ ಗಣಿಗ
ಮಂಡ್ಯ: ‘ಯಾರು ಏನೇ ಹೋರಾಟ ಮಾಡಲಿ, ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗಳನ್ನು ನಮ್ಮ ಸರ್ಕಾರ ಮಾಡೇ ಮಾಡುತ್ತದೆ. ಮಂಡ್ಯದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಇದರ ಅನುಕೂಲ ರೈತರ ಮಕ್ಕಳಿಗೆ ಆಗುತ್ತದೆ. ದೊಡ್ಡ ಹಳ್ಳಿಯ ರೀತಿ ಇರುವ ಮಂಡ್ಯ ಅಭಿವೃದ್ಧಿಯಾಗಬೇಕು. ರೈತರ ವಿರೋಧದ ಹಿಂದೆ ಯಾವ ಷಡ್ಯಂತ್ರ ಇದೆಯೋ ಗೊತ್ತಿಲ್ಲ’ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಈ ಎರಡು ಯೋಜನೆಗಳಿಂದ ಕೆಆರ್ಎಸ್ ಅಣೆಕಟ್ಟೆಗೆ ಯಾವುದೇ ಧಕ್ಕೆ ಆಗುವುದಿಲ್ಲ. ದೇಶ–ವಿದೇಶಗಳಿಂದ ಪ್ರವಾಸಿಗರು ಬರಬೇಕು. ಸಾವಿರಾರು ಜನರು ಬಂದರೆ ಡ್ಯಾಂ ಕಲ್ಲಿಗೆ ಗುದ್ದುತ್ತಾರಾ’ ಎಂದು ಪ್ರಶ್ನಿಸಿದರು.
‘20 ರೂಪಾಯಿ ಕರ್ಪೂರ ಹಚ್ಚೋಕೆ ಏಕೆ ₹100 ಕೋಟಿ’ ಎಂಬ ರೈತ ಮುಖಂಡರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಕರ್ಪೂರ ಹಚ್ಚೋಕೆ 20 ರೂಪಾಯಿ ಸಾಕು. ಆದರೆ, 20 ಸಾವಿರ ಜನರು ಕುಳಿತು ನೋಡಲು ಮೂಲಸೌಕರ್ಯ ಬೇಕಲ್ವಾ? ಯೋಜನೆಗೆ ಡಿಪಿಆರ್ ಆಗುತ್ತದೆ. ಯಾವುದಕ್ಕೆ ಎಷ್ಟು ಖರ್ಚು ಆಗುತ್ತದೆ ಎಂಬುದನ್ನು ಪರಿಶೀಲಿಸಿ. ಭ್ರಷ್ಟಾಚಾರ ಕಂಡರೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ’ ಎಂದು ತಿರುಗೇಟು ನೀಡಿದರು.
₹100 ಕೋಟಿ ಕಾವೇರಿ ಆರತಿಗೆ ವಿರೋಧ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿ ಆಗಿದ್ದಾಗ ₹8 ಸಾವಿರ ಕೋಟಿ ಕೊಟ್ಟೆ. ಇಳಿದ್ಮೇಲೆ ಹೊರಟೋಯ್ತೂ ಅನ್ನೋದಲ್ಲ. ಯೋಜನೆಗೆ ನಮ್ಮ ಸರ್ಕಾರ ₹100 ಕೋಟಿ ಕೊಡ್ತಿರೋದು ಒರಿಜಿನಲ್’ ಎಂದು ಕುಟುಕಿದರು.
ಮುಖ್ಯಮಂತ್ರಿಯವರ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ‘ನಾನು ಯಾವುದೇ ಮಂತ್ರಿಗಿರಿ ಆಕಾಂಕ್ಷಿ ಅಲ್ಲ. ಮೊದಲ ಬಾರಿಗೆ ಶಾಸಕ ಆಗಿದ್ದೀನಿ ಒಳ್ಳೆ ಕೆಲಸ ಮಾಡುತ್ತೇನೆ’ ಎಂದರು.
ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ‘ಸಾವಿನ ಮೇಲೆ ರಾಜಕಾರಣ ಮಾಡೋದು ಬಿಜೆಪಿಯವರ ಹುಟ್ಟುಗುಣ. ಡಾ.ರಾಜಕುಮಾರ್ ಸತ್ತಾಗ ಯಾರೂ ಗಲಾಟೆ ಮಾಡ್ತಿರಲಿಲ್ಲ. ನನ್ನ ಕಣ್ಣ ಮುಂದೆಯೇ ಪೊಲೀಸರು ನಾಲ್ವರು ಅಭಿಮಾನಿಗಳಿಗೆ ಗುಂಡು ಹೊಡೆದ್ರು. ಅವತ್ತು ಆಗಿರಲಿಲ್ವಾ ವೈಫಲ್ಯ? ಅವತ್ತು ಕುಮಾರಸ್ವಾಮಿಗೆ ನೆನಪಿರಲಿಲ್ವಾ ಭದ್ರತೆ ಒದಗಿಸಬೇಕು ಅಂತ? ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.