ADVERTISEMENT

ಮಂಡ್ಯ| ಕಾಡಾನೆ ದಾಳಿಯಿಂದ ಟೊಮೆಟೊ, ರಾಗಿ, ಭತ್ತದ ಫಸಲು ನಾಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:25 IST
Last Updated 29 ಡಿಸೆಂಬರ್ 2025, 6:25 IST
ಹಲಗೂರು ಸಮೀಪದ ನಿಟ್ಟೂರು ಗ್ರಾಮದಲ್ಲಿ ರೈತ ಗಂಗರಾಜು ಅವರು ಬೆಳೆದಿದ್ದ ಟೊಮೆಟೊ ಫಸಲು ಕಾಡಾನೆ ದಾಳಿಯಿಂದ ಹಾಳಾಗಿರುವುದು 
ಹಲಗೂರು ಸಮೀಪದ ನಿಟ್ಟೂರು ಗ್ರಾಮದಲ್ಲಿ ರೈತ ಗಂಗರಾಜು ಅವರು ಬೆಳೆದಿದ್ದ ಟೊಮೆಟೊ ಫಸಲು ಕಾಡಾನೆ ದಾಳಿಯಿಂದ ಹಾಳಾಗಿರುವುದು    

ಹಲಗೂರು: ಕನಕಪುರ ತಾಲ್ಲೂಕಿನ ಭೀಮನಕಿಂಡಿ ಅರಣ್ಯ ಪ್ರದೇಶದಿಂದ ಆಗಮಿಸಿದ ಎಂಟಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಟೊಮೆಟೊ, ರಾಗಿ ಮತ್ತು ಭತ್ತದ ಫಸಲನ್ನು ತಿಂದು, ತುಳಿದು ನಾಶ ಮಾಡಿರುವ ಘಟನೆ ಸಮೀಪದ ನಿಟ್ಟೂರು ಗ್ರಾಮ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಭೀಮನಕಿಂಡಿ ಅರಣ್ಯ ಪ್ರದೇಶದಿಂದ ನಿಟ್ಟೂರು, ಸರಗೂರು, ಎನ್.ಹಲಸಹಳ್ಳಿ, ಲಿಂಗಪಟ್ಟಣ ಹೊರವಲಯದ ಕೃಷಿ ಪ್ರದೇಶದ ಕಡೆಗೆ ಬಂದ ಆನೆಗಳು ರೈತರ ಫಸಲನ್ನು ತಿಂದು, ತುಳಿದು ಹಾಕಿವೆ. ಆನೆಗಳು ಆಗಮಿಸಿದ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆಯಿಂದಲೇ ಆನೆಗಳನ್ನು ಕಾಡಿಗಟ್ಟುವ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿದರು.

ಆದರೆ ಅಷ್ಟರಲ್ಲಾಗಲೇ ನಿಟ್ಟೂರು ಗ್ರಾಮದ ಗಂಗರಾಜು ಅವರಿಗೆ ಸೇರಿದ ಟೊಮೆಟೊ ತೋಟ, ಲಕ್ಷ್ಮಯ್ಯ ಅವರಿಗೆ ಸೇರಿದ ಬಾಳೆ ಗಿಡಗಳು, ಈರಪ್ಪ ಅವರಿಗೆ ಸೇರಿದ ಕೊಯ್ಲಿಗೆ ಬಂದಿದ್ದ ಭತ್ತದ ಫಸಲು, ಕಾಳಯ್ಯ ಅವರಿಗೆ ಸೇರಿದ ಕನಕಾಂಬರ ಬೆಳೆ ಫಸಲು ಹಾನೀಗೀಡಾಗಿದ್ದವು.

ADVERTISEMENT

ರೈತ ಗಂಗಯ್ಯ ಮಾತನಾಡಿ, ‘ಕಷ್ಟ ಪಟ್ಟು ಟೊಮೆಟೊ ಬೆಳೆದಿದ್ದು, ಉತ್ತಮ ಇಳುವರಿ ಬಂದಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಹ ಇದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆವು. ಆನೆ ದಾಳಿಯಿಂದ ಕಟಾವಿಗೆ ಬಂದಿದ್ದ ಫಸಲು ನೆಲಕಚ್ಚಿವೆ. ಪರಿಣಾಮ ಅಪಾರ ನಷ್ಟ ಉಂಟಾಗಿದೆ. ನಷ್ಟಕ್ಕೀಡಾದ ಫಸಲಿಗೆ ಸೂಕ್ತ ಪರಿಹಾರ ನೀಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಡು ಪ್ರಾಣಿಗಳು ಕಾಡಿನಿಂದ ಜನವಸತಿ ಪ್ರದೇಶದತ್ತ ಬರದಂತೆ ತಡೆಗಟ್ಟಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ರೈತ ಮನು ಮಾತನಾಡಿ, ‘ಕಾಡು ಪ್ರಾಣಿಗಳ ದಾಳಿಯಿಂದ ಫಸಲು ರಕ್ಷಿಸಿಕೊಳ್ಳುವ ಜೊತೆಗೆ ನಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಆತಂಕ ಎದುರಿಸುವಂತಾಗಿದೆ. ದಿನನಿತ್ಯ ಕಾಡು ಪ್ರಾಣಿಗಳಾದ ಜಿಂಕೆ, ಹಂದಿ ಮತ್ತು ಆನೆ ದಾಳಿಯಿಂದ ಫಸಲನ್ನು ಉಳಿಸಿಕೊಳ್ಳಲು ರಾತ್ರಿಯಿಡೀ ಜಮೀನಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ನೋವು ತೋಡಿಕೊಂಡರು.

ಹಲಗೂರು ಸಮೀಪದ ನಿಟ್ಟೂರು ಗ್ರಾಮದಲ್ಲಿ ರೈತ ಈರಪ್ಪ ಅವರ ಭತ್ತದ ಫಸಲು ಕಾಡಾನೆ ದಾಳಿಯಿಂದ ಹಾಳಾಗಿರುವುದು