ಮಂಡ್ಯ: ‘ಕೆ.ಆರ್.ಸಾಗರದಲ್ಲಿ ನಡೆದ ಐವರ ಕೊಲೆ ಪ್ರಕರಣದ ಆರೋಪಿಯಾಗಿರುವ ಮಹಿಳೆಯು ಸುತ್ತಿಗೆ ಮತ್ತು ಮಚ್ಚಿನೊಂದಿಗೆ ಮನೆಗೆ ಬಂದು, ದುಷ್ಕೃತ್ಯ ನಡೆಸಿದ್ದಾಳೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.
‘ಕೆ.ಆರ್.ಸಾಗರ ಗ್ರಾಮದಲ್ಲಿ ಬಜಾರ್ ಲೈನ್ ನಿವಾಸಿ ಗಂಗಾ ರಾಮ್ ಅವರ ಪತ್ನಿ ಲಕ್ಷ್ಮಿ (27), ನಾಲ್ವರು ಮಕ್ಕಳನ್ನು ರಾತ್ರಿ ಮಲಗಿದ್ದ ವೇಳೆ ಕೊಲೆ ಮಾಡಿ ಆರೋಪಿ ಪರಾರಿ ಯಾಗಿದ್ದಳು. ವಿಶೇಷ ಕಾರ್ಯಾಚರಣೆ ನಡೆಸಿ ಮಹಿಳೆ ಯನ್ನು ಬಂಧಿಸಲಾಗಿದೆ’ ಎಂದು ಸುದ್ದಿ ಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
‘ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಈ ಘಟನೆಯು ಕೆ.ಆರ್.ಎಸ್.ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗ ಪಟ್ಟಣ ಡಿವೈಎಸ್ಪಿ ಎಸ್.ಎನ್.ಸಂದೇಶ್ ಕುಮಾರ್ ನೇತೃತ್ವದಲ್ಲಿ ಐದು ತಂಡ ರಚಿಸಲಾಗಿತ್ತು. ಈ ಮಹಿಳೆ
ಯನ್ನು ಖಚಿತ ಹಾಗೂ ಬಲವಾದ ಪುರಾವೆ ಆಧಾರದಲ್ಲಿ ಬಂಧಿಸಿದೆ’ ಎಂದರು.
‘ಆರೋಪಿ ಮಹಿಳೆ ಮತ್ತು ಮೃತ ಮಹಿಳೆ ಇಬ್ಬರೂ ಸಹೋದರ ಸಂಬಂಧಿಗಳಾಗಿದ್ದು, ಆರೋಪಿಯು ಮೃತ ಮಹಿಳೆಯ ಪತಿ ಗಂಗಾರಾಮ್ ಜತೆಗೆ ಆಕರ್ಷಣೆ ಹೊಂದಿದ್ದಳು. ಹಲವು ಬಾರಿ ಸಲುಗೆಯಿಂದ ಇದ್ದು, ತನ್ನ ದಾರಿಗೆ ಅಡ್ಡವಾಗಿದ್ದ ಮಹಿಳೆಯನ್ನು ಪತಿಯಿಂದ ದೂರ ಮಾಡಲು, ದಂಪತಿ ಮಧ್ಯೆ ಭಿನ್ನಾಭಿಪ್ರಾಯ ತರಲು ಪ್ರಯತ್ನಿಸಿ ಸಫಲವಾಗಿರಲಿಲ್ಲ. ಈ ಕಾರಣದಿಂದ ಆಕೆಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದಳು.
‘ಮಧ್ಯರಾತ್ರಿಯಲ್ಲಿ ಗಂಗಾರಾಮ್ ಪತ್ನಿಗೆ ಸುತ್ತಿಗೆಯಿಂದ ಮತ್ತು ಮಚ್ಚಿ ನಿಂದ ಹೊಡೆದು ಕೊಲೆ ಮಾಡಿದ್ದಾಳೆ. ಈ ವೇಳೆಗೆ ಮಲಗಿದ್ದ ಮಕ್ಕಳು ಒಂದೊಂದಾಗಿ ಎಚ್ಚರಗೊಂಡು ಆರೋಪಿ ಮಹಿಳೆಯನ್ನು ಗುರುತಿಸಿ ದಾಗ ಗುರುತು ಹಿಡಿದ ಮಕ್ಕಳನ್ನೂ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾಳೆ. ಈ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಮನೆಯ ಬೀರು ತೆರೆದು ಕಳ್ಳತನಕ್ಕೆ ಬಂದವರ ಕೃತ್ಯವೆಂದು ನಂಬಿಕೆ ಬರುವಂತೆ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೊರಗಡೆಯಿಂದ
ಚಿಲಕ ಹಾಕಿ ತೆರಳಿದ್ದಾಳೆ’ ಎಂದು ಹೇಳಿದರು.
‘ಕೊಲೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬುದು ಇನ್ನಷ್ಟು ತನಿಖೆಯಿಂದ ಗೊತ್ತಾಗಲಿದೆ. ಕೊಲೆ ಮಾಡುವ ಮುನ್ನ ಅವರ ಮ
ನೆಯಲ್ಲೇ ಅರೋಪಿ ಇದ್ದಳು. ಆ ಸಮಯದಲ್ಲಿ ಆಹಾರದಲ್ಲಿ ಏನಾದರೂ ವಿಷ ಅಥವಾ ಮಂಪರು ಬರುವ ಪದಾರ್ಥಗಳನ್ನು ಹಾಕಿದ್ದಾಳೆಯೇ ಎಂಬುದನ್ನು ತಿಳಿಯಲು ಪ್ರಯೋಗಾಲಯದಿಂದ ವರದಿ ಬರಬೇಕಿದೆ. ಕೊಲೆಯಲ್ಲಿ ಮತ್ತಷ್ಟು ಜನ ಭಾಗಿಯಾಗಿದ್ದರೆ ಅವರನ್ನು ಬಂಧಿಸಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.