ಶ್ರೀರಂಗಪಟ್ಟಣ: ದಸರಾ ಉತ್ಸವದ ನಿಮಿತ್ತ ಪಟ್ಟಣದಲ್ಲಿ ಭಾನುವಾರ ನಡೆದ ನಾಡ ಕುಸ್ತಿ ಪಂದ್ಯಾವಳಿ ರಂಜಿಸಿತು.
ಪಟ್ಟಣದ ಸೆಂದಿಲ್ ಕೋಟೆ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ಶೈಲಿಯ ಕುಸ್ತಿ ಸಂಘ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ
ಚಾಲನೆ ನೀಡಿದರು.
ಕುಸ್ತಿ ಪಂದ್ಯಾವಳಿಯಲ್ಲಿ 40ಕ್ಕೂ ಹೆಚ್ಚು ಜೋಡಿಗಳು ಗೆಲುವಿಗಾಗಿ ಕೆಮ್ಮಣ್ಣು ಮಟ್ಟಿ ಮೇಲೆ ಸೆಣಸಾಡಿದವು.
ಪ್ರಸಿದ್ಧ ಕುಸ್ತಿಪಟುಗಳಾದ ಮೈಸೂರಿನ ಭೂತಪ್ಪನ ಗರಡಿಯ ಪೈ.ಯಶ್ವಂತ್ ಹಾಗೂ ಪೈ.ಪ್ರಶಾಂತ್ ಅವರ ನಡುವೆ ನಡೆದ ಮಾರ್ಫಿಟ್ ಕುಸ್ತಿ
ಗಮನ ಸೆಳೆಯಿತು.
ಮೈಸೂರಿನ ಪೈ.ಶಬ್ಬೀರ್ಖಾನ್ ಮತ್ತು ಗಂಜಾಂನ ಪೈ.ತೇಜಸ್ ಹಾಗೂ ಬಾಬುರಾಯನಕೊಪ್ಪಲು ಪೈ.ಕಿರಣ್ ಮತ್ತು ಮೈಸೂರಿನ ಪೈ.ಶಾಕೀಬ್ ಜೋಡಿಗಳ ನಡುವೆ 20 ನಿಮಿಷ ಕುಸ್ತಿ ನಡೆಯಿತು. ಸೋನೆ ಸುರಿದ ಕಾರಣ ಕೆಲಕಾಲ ಕುಸ್ತಿ ಪಂದ್ಯ ಸ್ಥಗಿತಗೊಂಡಿತ್ತು. ಕುಸ್ತಿ ವೀಕ್ಷಿಸಲು ಪಟ್ಟಣ ಮಾತ್ರವಲ್ಲದೆ ಮೈಸೂರು ಮತ್ತು ಮಂಡ್ಯ
ಜಿಲ್ಲೆಗಳ ವಿವಿಧೆಡೆಗಳಿಂದ ಕುಸ್ತಿ ಪ್ರೇಮಿಗಳು ಆಗಮಿಸಿದ್ದರು.
ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಎಸಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ, ಪುರಸಭೆ ಮುಖ್ಯಾಧಿಕಾರಿ ಮಾನಸ, ಉಪಾಧ್ಯಕ್ಷ ಎಸ್. ಪ್ರಕಾಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಟಿ. ಶ್ರೀಧರ್, ನಿಮಿಷಾಂಬಾ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಹಿರಿಯ ಕುಸ್ತಿಪಟುಗಳಾದ ಪೈ.ಮುಕುಂದ, ಪೈ. ಶ್ರೀಕಂಠು, ಪೈ.ಲಕ್ಷ್ಮಣಸಿಂಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.