ADVERTISEMENT

ಮಂಡ್ಯ | ಸಾಲಕ್ಕಾಗಿ ಯುವಕನ ಜೀತ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 15:25 IST
Last Updated 10 ಜೂನ್ 2020, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗಮಂಗಲ: ಮಾಂಸದಂಗಡಿ ಮಾಲೀಕನೊಬ್ಬ ಸಾಲ ನೀಡಿ, ಮರುಪಾವತಿ ಆಗುವವರೆಗೂ ಯುವಕನೊಬ್ಬನನ್ನು ಜೀತಕ್ಕೆ ಇಟ್ಟುಕೊಂಡಿದ್ದ ಪ್ರಕರಣ ಬೆಳ್ಳೂರು ಕ್ರಾಸ್‌ನಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಪರಿಣಾಮ ತಹಶೀಲ್ದಾರ್‌ ಕುಂಞಿ ಅಹಮದ್ ಬುಧವಾರ ಯುವಕನನ್ನು ರಕ್ಷಿಸಿ, ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಬೆಳ್ಳೂರು ಕ್ರಾಸ್‌ನ ಶೇಖರ್ ಮಟನ್ ಸ್ಟಾಲ್ ಮಾಲೀಕ ಶೇಖರ್ 23 ವರ್ಷದ ಯುವಕನೊಬ್ಬನಿಗೆ ₹ 40 ಸಾವಿರ ಸಾಲ ನೀಡಿದ್ದ. ಜೀತ ಮಾಡಿ ಸಾಲ ತೀರಿಸುವಂತೆ ಯುವಕನನನ್ನು ಅಂಗಡಿಯಲ್ಲೇ ಇಟ್ಟುಕೊಂಡಿದ್ದ. ಕಳೆದ 8 ವರ್ಷಗಳಿಂದ ಕೆಲಸ ಮಾಡಿದ್ದರೂ ಸಾಲ ತೀರಿರಲಿಲ್ಲ. ಈ ಕುರಿತು ಜೀವಜ್ಯೋತಿ ಸಂಸ್ಥೆಯ ಸದಸ್ಯರು ತಹಶೀಲ್ದಾರ್‌ಗೆ ದೂರು ಕೊಟ್ಟಿದ್ದರು.

ADVERTISEMENT

ತಹಶೀಲ್ದಾರ್‌ ಕುಂಞಿ ಅಹಮದ್ ನೇತೃತ್ವದಲ್ಲಿ ತಾಲ್ಲೂಕು‌ ಕಾರ್ಯನಿರ್ವಾಹಕ ಅಧಿಕಾರಿ‌ ಅನಂತರಾಜು, ಕಾರ್ಮಿಕ ನಿರೀಕ್ಷಕ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ರಾಜಶೇಖರ್, ಬೆಳ್ಳೂರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ದಾಳಿ ನಡೆಸಿ ಯುವಕನನ್ನು ರಕ್ಷಿಸಿದರು. ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.