ADVERTISEMENT

ಆಟೋ ರಿಕ್ಷಾ ಚಾಲಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 10:15 IST
Last Updated 21 ಜನವರಿ 2011, 10:15 IST

ಮೈಸೂರು: ಆಟೋಗಳಿಗೆ ಗ್ಯಾಸ್‌ಕಿಟ್ ಅಳವಡಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮೈಸೂರು ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯರು ಆರ್‌ಟಿಓ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಗ್ಯಾಸ್‌ಕಿಟ್ ಅಳವಡಿಕೆಗೆ ಸುಪ್ರೀಂ ಕೋರ್ಟ್ 2010ರ ಡಿ.30ರಂದು ತಡೆ ನೀಡಿದೆ. ಆದರೆ, ರಾಜ್ಯ ಸರ್ಕಾರ ಕಡ್ಡಾಯವಾಗಿ ಗ್ಯಾಸ್‌ಕಿಟ್ ಅಳವಡಿಸಿಕೊಳ್ಳುವಂತೆ ಸೂಚಿಸುವ ಮೂಲಕ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘನೆ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪೆಟ್ರೋಲ್ ಇಂಧನದ ಆಟೋ ರಿಕ್ಷಾಗಳಿಗೆ ಅರ್ಹತಾ ಪ್ರಮಾಣಪತ್ರ ನೀಡಲು ಪೂರ್ವ ವಲಯದ ಆರ್‌ಟಿಓ ಅಧಿಕಾರಿ ನಿರಾಕರಿಸುತ್ತಿದ್ದಾರೆ. ಆಟೋಗಳಿಗೆ ಕಡ್ಡಾಯವಾಗಿ ಗ್ಯಾಸ್‌ಕಿಟ್ ಅಳವಡಿಸುವವರೆಗೂ ಅರ್ಹತಾ ಪ್ರಮಾಣ ಪತ್ರ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಬಡ ಆಟೋ ರಿಕ್ಷಾ  ಚಾಲಕರು ಪರದಾಡುವಂತಾಗಿದೆ. ಆದ್ದರಿಂದ, ಈ ಕೂಡಲೇ ಗ್ಯಾಸ್ ಅಳವಡಿಕೆ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಿ.ಟಿ.ರಾಜಣ್ಣ, ಗೌರವ ಅಧ್ಯಕ್ಷ ಹಿನಕಲ್ ಚನ್ನೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಮಹೇವಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.