ADVERTISEMENT

ಆನೆ ಹಿಂಡು ಮರಳಿ ಕಾಡಿಗೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:21 IST
Last Updated 21 ಡಿಸೆಂಬರ್ 2013, 9:21 IST
ಹುಣಸೂರು ತಾಲ್ಲೂಕಿನ ಹೈರಿಗೆ ಕೆರೆಯಲ್ಲಿ ಶುಕ್ರವಾರ ಜಲಕ್ರೀಡೆಯಲ್ಲಿ ಮಗ್ನವಾಗಿರುವ ಕಾಡಾನೆಗಳ ಹಿಂಡು
ಹುಣಸೂರು ತಾಲ್ಲೂಕಿನ ಹೈರಿಗೆ ಕೆರೆಯಲ್ಲಿ ಶುಕ್ರವಾರ ಜಲಕ್ರೀಡೆಯಲ್ಲಿ ಮಗ್ನವಾಗಿರುವ ಕಾಡಾನೆಗಳ ಹಿಂಡು   

ಹುಣಸೂರು: ಇಲ್ಲಿಗೆ ಸಮೀಪದ ಹೆಗ್ಗಂದೂರು ಬಳಿಯ ಹೈರಿಗೆ ಕೆರೆಯಲ್ಲಿ ಶುಕ್ರವಾರ ಬೀಡುಬಿಟ್ಟು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತಲ್ಲಣ ಮೂಡಿಸಿದ್ದ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ವೀರನಹೊಸಹಳ್ಳಿ ಅರಣ್ಯ ಪ್ರದೇಶದಿಂದ ಬಂದಿದ್ದ ಒಂಬತ್ತು ಕಾಡಾನೆಗಳು ಶುಕ್ರವಾರ ಬೆಳಿಗ್ಗೆ ಹೈರಿಗೆ ಕೆರೆಯಲ್ಲಿ ಕಾಣಿಸಿಕೊಂಡವು. ಆನೆಗಳನ್ನು ನೋಡಿದ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರು.

ಬೆಳಿಗ್ಗೆ 7 ಗಂಟೆಯಿಂದಲೇ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಲಾಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಆರು ಆನೆಗಳನ್ನು ಹಿಂಡಗೂಡ್ಲು, ಬೀರನಹಳ್ಳಿ, ಲಕ್ಷ್ಮಣತೀರ್ಥ, ನಾಗಾಪುರ ಮಾರ್ಗವಾಗಿ ಕಾಡಿಗೆ ಅಟ್ಟಲಾಯಿತು. ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದರೂ ಕೆರೆಯೊಳಗೆ ಹಿಂಡಿನಲ್ಲಿದ್ದ ಮೂರು ಆನೆಗಳು ನೀರಿನಿಂದ ಕದಲದೇ ಮೋಜು ಮಸ್ತಿಯಲ್ಲಿ ತೊಡಗಿದ್ದವು. ಆಗ ಅರಣ್ಯ ಸಿಬ್ಬಂದಿ ದೋಣಿ ಮೂಲಕ ನದಿಯೊಳಗೆ ತೆರಳಿ ಪಟಾಕಿ ಸಿಡಿಸಿ ಅವುಗಳನ್ನು ನೀರಿನಿಂದ ಹೊರಕ್ಕೆ ಅಟ್ಟಿದರು.

‘ಆರು ಆನೆಗಳನ್ನು ಸಾಗಿಸಿದ ಮಾರ್ಗದಲ್ಲೇ ರಾತ್ರಿ 8 ಗಂಟೆ ವೇಳೆಗೆ ಕಾಡಿಗೆ ಅಟ್ಟಲಾಯಿತು’ ಎಂದು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಕುಮಾರ್‌ ತಿಳಿಸಿದ್ದಾರೆ.

ಬೃಹತ್ ಶ್ರದ್ಧಾಂಜಲಿ ಸಭೆ ನಾಳೆ
ಮೈಸೂರು: ಅರಮನೆ ಮುಂಭಾಗದಲ್ಲಿ ಡಿ. 22ರಂದು ಸಂಜೆ 4 ಗಂಟೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಶ್ರದ್ಧಾಂಜಲಿ ಸಭೆ ಮತ್ತು ಯದುವಂಶದ ಅರಸರ ಕೊಡುಗೆ ಸ್ಮರಣೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಎಚ್‌. ಗಂಗಾಧರನ್‌ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ  ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ. ಮಾದೇಗೌಡ ತಿಳಿಸಿದ್ದಾರೆ.

ಶ್ರದ್ಧಾಂಜಲಿ ಸಭೆ ಆಯೋಜನೆ ಕುರಿತು ಮುಖ್ಯಮಂತ್ರಿಗೆ ಮಾಹಿತಿ ತಲುಪಿಸಲಾಗಿದೆ. ಮುಖ್ಯಮಂತ್ರಿ ಬರುವಿಕೆ ಆಧರಿಸಿ ಸಭೆ ಆಯೋಜನೆ ದಿನಾಂಕ ಬದಲಾಗುವ ಸಾಧ್ಯತೆ ಇದೆ. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸುವರು. ಈ ಸಭೆಗೆ ಎರಡು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.  ಶ್ರದ್ಧಾಂಜಲಿ  ಸಭೆಯಂದು ಅರಮನೆ ಮುಂಭಾಗದಲ್ಲಿ ಒಡೆಯರ್‌ ಅವರ ದೊಡ್ಡ ಭಾವಚಿತ್ರ ಇಟ್ಟು ಪೂಜೆ ನೆರವೇರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.