ADVERTISEMENT

`ಎಲ್ಲ ವರ್ಗದವರಿಗೂ ಕಾನೂನು ಅರಿವು ಅಗತ್ಯ'

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 8:14 IST
Last Updated 2 ಸೆಪ್ಟೆಂಬರ್ 2013, 8:14 IST

ನಂಜನಗೂಡು: ಸಮಾಜದ ಎಲ್ಲ ವರ್ಗದ ಜನರು ಕಾನೂನಿನ ಅರಿವು ಪಡೆಯುವುದು ಅವಶ್ಯಕ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಹೇಳಿದರು.

ಪಟ್ಟಣದ ಸಿವಿಲ್ ನ್ಯಾಯಾಲಯಗಳ ಆವರಣದಲ್ಲಿ ಶನಿವಾರ ನಡೆದ ಒಂದು ದಿನದ `ಪ್ಯಾರಾ ಲೀಗಲ್ ವಾಲೆಂಟಿಯರ್ಸ್‌' ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಂವಿಧಾನ ನಮಗೆ ಒದಗಿಸಿರುವ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನೂ ಪಾಲಿಸಬೇಕಾಗಿದೆ. ಮುಗ್ಧ ಜನರು ಕಾನೂನಿನ ಅರಿವು ಇಲ್ಲದೆ ಮೋಸ ಹೋಗುವುದನ್ನು ತಡೆಯಬೇಕಿದೆ.

ಇದಕ್ಕೆ ಪೂರಕವಾಗಿ ನ್ಯಾಯಾಂಗ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತರು. ಮಹಿಳಾ ಸಂಘದ ಆಯ್ದ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ  `ಪ್ಯಾರಾ ಲೀಗಲ್ ವಾಲೆಂಟಿಯರ್ಸ್‌' ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ.

ಇಲ್ಲಿ ತರಬೇತಿ ಪಡೆದವರು ತಮ್ಮ ಗ್ರಾಮ ಅಥವಾ ಪರಿಸರದಲ್ಲಿನ ಜನರಿಗೆ ಅನ್ಯಾಯವಾದಾಗ ಅಥವಾ ಶೋಷಣೆ ಎದುರಾದಾಗ ಯಾವ ರೀತಿ ಕಾನೂನು ರಕ್ಷಣೆ ಪಡೆಯಬಹುದು ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್, ವಕೀಲರ ಸಂಘದ ಅಧ್ಯಕ್ಷ ಎ.ಪಿ.ಮಹೇಶ್‌ಬಾಬು, ಸಹಾಯಕ ಸರ್ಕಾರಿ ಅಭಿಯೋಜಕಿ ಶಕೀಲಾ ಅಬೂಬಕರ್, ಅಪರ ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ಎಸ್. ಉಷಾ, ವಕೀಲರುಗಳಾದ ಕೆ.ಬಿ.ಜಯದೇವಪ್ಪ, ಎಂ.ಜೆ. ಸೇತುರಾವ್, ಎನ್. ಶ್ರೀಕಂಠಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.