ADVERTISEMENT

ಗಾಂಧೀಜಿ ಅದರ್ಶ ಅಳವಡಿಸಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 9:40 IST
Last Updated 3 ಏಪ್ರಿಲ್ 2011, 9:40 IST

ಮೈಸೂರು: ಸಾಮಾಜಿಕ ಕ್ಷೇತ್ರದಲ್ಲಿ ಮಹಾತ್ಮ ಗಾಂಧೀಜಿಯವರಂಥ ನಾಯಕರು ಇಂದು ಇಲ್ಲದಿರುವುದು ವಿಪರ್ಯಾಸ ಎಂದು ಗಾಂಧಿವಾದಿ ಸುರೇಂದ್ರ ಕೌಲಗಿ ವಿಷಾದಿಸಿದರು.
ಕರ್ನಾಟಕ ಗಾಂಧಿ ಭವನ ಮತ್ತು ವಾತ್ಸಲ್ಯ ಶಿಕ್ಷಣ ವಿದ್ಯಾಲಯ ವತಿಯಿಂದ ನಟರಾಜ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಕಳಕಳಿಯಿರುವ ಜನನಾಯಕರು ಈಗ ಇಲ್ಲವಾಗಿದ್ದಾರೆ. ಅಕ್ಕಮಹಾದೇವಿ, ಬಸವಣ್ಣ, ಅರವಿಂದ ಘೋಷ್, ಸ್ವಾಮಿ ವಿವೇಕಾನಂದ ಮುಂತಾದ ಮಹನೀಯರು ಜನಿಸಿದ ಪವಿತ್ರ ನಾಡು ಭಾರತ. ಈ ದೇಶಕ್ಕೆ 30 ಸಾವಿರ ವರ್ಷಗಳ ಇತಿಹಾಸವಿದೆ.

ಹೊಸ ಜೀವನದ ಹೊಸ್ತಿಲಲ್ಲಿ ನಿಂತಿರುವ ನೀವೆಲ್ಲರೂ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಗಾಂಧೀಜಿ ಅವರ ವಿಚಾರಧಾರೆಗಳು ಸರ್ವಕಾಲಿಕವಾದವು. ಸತ್ಯ, ಅಹಿಂಸೆಯ ಆರಾಧಕರಾಗಿದ್ದ ಅವರು ನುಡಿದಂತೆ ನಡೆಯುವ ಪ್ರವೃತ್ತಿಯವರಾಗಿದ್ದರು. ಅವರ ಹೋರಾಟಕ್ಕೆ ಇಂಗ್ಲಿಷರೂ ಮಂಡಿಯೂರಬೇಕಾಯಿತು. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಆಂದೋಲನಗಳ ಮೂಲಕ ಬ್ರಿಟಿಷರನ್ನು ಮಣಿಸಿದರು. ಮಾಡು ಇಲ್ಲವೇ ಮಡಿ ನಿರ್ಣಯಕ್ಕೆ ಬದ್ಧರಾಗಿದ್ದರು.

ಹಾಗಾಗಿಯೇ ಇಂದು ವಿಶ್ವದ ಎಲ್ಲ ದೇಶಗಳು ಗಾಂಧಿ ಹೋರಾಟದ ಮಾದರಿಗಳನ್ನು ಅನುಸರಿಸುತ್ತಿವೆ. ಖಾದಿಯನ್ನು ವಿಶಿಷ್ಟ ಜೀವನ ಶೈಲಿ ದ್ಯೋತಕ ಎಂದು ಪರಿಗಣಿಸಿದ್ದ ಅವರು ಖಾದಿ ಉದ್ಯಮವನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ತಿಳಿಸಿದರು.ನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಹಾರಾಜ ಕಾಲೇಜು ಪ್ರಾಧ್ಯಾಪಕ ಡಾ.ಎಸ್.ಶಿವರಾಜಪ್ಪ, ವಾತ್ಸಲ್ಯ ಶಿಕ್ಷಣ ವಿದ್ಯಾಲಯ ಪ್ರಾಂಶುಪಾಲ ಮಹೇಶ ದಳಪತಿ ಇತರರು ಇದ್ದರು.ಉಪನ್ಯಾಸಕಿ ಸುಮ ಸ್ವಾಗತಿಸಿ, ಚೈತ್ರಲಕ್ಷ್ಮಿ ನಿರೂಪಿಸಿ, ಸುನಿತಾ ವಂದಿಸಿದರು. ವಿವಿಧ ಕಾಲೇಜುಗಳ    ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.