ಮೈಸೂರು: ಕನ್ನಡ ಸಾಹಿತ್ಯದ ಪ್ರತಿನಿಧಿ ಗಳಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರನ್ನು ಬಿಂಬಿಸಲಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ಸಿಗದ ಅನೇಕ ಶ್ರೇಷ್ಠ ಸಾಹಿತಿಗಳೂ ಕನ್ನಡ ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಸಾಹಿತಿ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇಲ್ಲಿನ ಜನರ ಅಭಿವೃದ್ಧಿಗಾಗಿ ಸಂಸ್ಥೆಯಲ್ಲಿ (ಒಡಿಪಿ) ಬುಧವಾರ ಆರಂಭಿಸಿದ ಮೂರು ದಿನಗಳ ಸಂಶೋಧನಾ ಕಮ್ಮಟದಲ್ಲಿ ಅವರು ‘ಸಂಶೋಧನಾ ಹಾದಿಯ ಸಂರಚನೆಗಳ ಸ್ವೀಕರಣೆ– ನಿರಾಕರಣೆ’ ಕುರಿತು ಮಾತನಾಡಿದರು.
‘ಎಲ್ಲಿ ನೋಡಿದರೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳೇ ರಾರಾಜಿಸು ತ್ತಿವೆ. ಶಾಲಾ– ಕಾಲೇಜುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ– ಹೀಗೆ, ಈ ಎಂಟು ಮಂದಿಯ ಚಿತ್ರಗಳನ್ನೇ ಗೋಡೆಯ ಮೇಲೆ ಬಿಡಿಸಿರುತ್ತಾರೆ. ಈ ರೀತಿ ಚಿತ್ರ ಬಿಡಿಸುವ ಅಗತ್ಯವೇನಿದೆ? ಈ ರೀತಿ ಚಿತ್ರ ಬಿಡಿಸಿ ಇವರು ಮಾತ್ರ ನಮ್ಮ ಸಾಹಿತ್ಯ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಅಗತ್ಯ ಇದೆಯೇ?’ ಎಂದು ಪ್ರಶ್ನಿಸಿದರು.
ಜ್ಞಾನಪೀಠ ಪ್ರಶಸ್ತಿ ಸಿಗದ ಪಿ. ಲಂಕೇಶ್, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಇತ್ಯಾದಿ ಸಾಹಿತಿಗಳು ಶ್ರೇಷ್ಠರಲ್ಲವೇ? ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಯೂ ಅಪಾರವಾದುದು. ಪ್ರವಾಸಿ ತಾಣಗಳಾದ ಜೋಗ ಜಲಪಾತ, ಮೈಸೂರು ಅರಮನೆ ಚಿತ್ರಗಳನ್ನು ಗೋಡೆಯ ಮೇಲೆ ಬಿಡಿಸಿ ಪ್ರಚಾರ ಕೊಟ್ಟಂತೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರ ಬಿಡಿಸುವ ಅಗತ್ಯವೇನಿಲ್ಲ ಎಂದು ಹೇಳಿದರು.
ತಾರತಮ್ಯ ಸಲ್ಲ: ಸಾಹಿತ್ಯ ಲೋಕದಲ್ಲಿ ತಾರತಮ್ಯ ಇದ್ದಂತೆ ಕಾಣುತ್ತಿದೆ. ಪ್ರಶಸ್ತಿ, ಬಹುಮಾನಗಳನ್ನು ನೀಡುವಾಗ ಮೊದಲ ಆದ್ಯತೆಯನ್ನು ಕವಿಗಳಿಗೇ ನೀಡಲಾಗುತ್ತದೆ. ನಂತರದ ಸ್ಥಾನ ಮಿಕ್ಕ ಪ್ರಕಾರಗಳ ಸಾಹಿತಿಗಳಿಗೆ ಸಿಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಶೋಧನೆ ಅವಕಾಶಗಳು ಈಗ ಹೆಚ್ಚಿವೆ. ಹಿಂದೆ ಬರಹದ ಮೂಲಗಳನ್ನು ಮಾತ್ರ ಸಂಶೋಧನಾ ಪರಿಕರಗಳೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗ ತಂತ್ರಜ್ಞಾನ ಸುಧಾರಿಸಿರುವ ಕಾರಣ, ಶ್ರವ್ಯ– ದೃಶ್ಯ ಮಾಧ್ಯಮಗಳನ್ನೂ ಸಂಶೋ ಧನೆಯ ಪರಿಕರಗಳಾಗಿ ಬಳಸಿ ಕೊಳ್ಳ ಬಹುದಾಗಿದೆ. ಆದ್ದರಿಂದ ಗುಣ ಮಟ್ಟದ ಸಂಶೋಧನೆ ಮಾಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.