ಪಿರಿಯಾಪಟ್ಟಣ: ತಾಲ್ಲೂಕಿನ ಹೊನ್ನಾಪುರ ಗ್ರಾಮದ ಕಾವೇರಿ ನದಿ ಪಾತ್ರದ ಅಕ್ರಮ ಮರಳು ದಂಧೆ ತಡೆಯಲು ತಾಲ್ಲೂಕು ಆಡಳಿತ, ಪೋಲೀಸರು ವಿಫಲವಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಚಾಮರಾಯನ ಕೋಟೆ ಗ್ರಾಮದಿಂದ ಹೊನ್ನಾಪುರ ಮಾರ್ಗವಾಗಿ ನಿತ್ಯ ವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಅಕ್ರಮ ಮರಳ ಗಣಿ, ಸಾಗಣೆ ತಡೆಯಲು ಹಲವು ಬಾರಿ ಕಂದಾಯ, ಲೋಕೋಪಯೋಗಿ, ಗಣಿ-ಭೂವಿಜ್ಞಾನ, ಹಾಗೂ ಪೋಲೀಸರಿಗೆ ದೂರು ಸಲ್ಲಿಸಿದ್ದರೂ, ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕಾವಲು ಪಡೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕಷ್ಣ ಮಾತನಾಡಿ ಅಕ್ರಮವಾಗಿ ಮರಳು ಸಾಗಣೆ ಮಾಡುವ ಸಂದರ್ಭದಲ್ಲಿ ಗ್ರಾಮಸ್ಥರು ಲಾರಿಗಳನ್ನು ತಡೆ ಹಿಡಿದು ಪೋಲೀಸರಿಗೆ ಒಪ್ಪಿಸಿದರೆ ಕೇಸು ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
ವಾರದೊಳಗೆ ಅಕ್ರಮ ಮರುಳು ಗಣಿ ತಡೆಯಲು ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು, ಗ್ರಾಮಸ್ಥರು, ಭಾಗವಹಿಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 3 ಲಾರಿ, 1 ಟ್ರಾಕ್ಟರ್ಗಳನ್ನು ಹೊನ್ನಾಪುರದಲ್ಲಿ ತಡೆ ಹಿಡಿದು, ಪ್ರತಿಭಟಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಕಾವಲು ಪಡೆಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮೋಹನ್, ಮುಖಂಡರಾದ ಕಷ್ಣಪ್ಪ, ಬಸವರಾಜು, ವೀರತಪ್ಪ, ಸೋಮಣ್ಣ, ಬಸಪ್ಪಯ್ಯ, ರಾಮೇಗೌಡ, ವಿನಯ್ ಕುಮಾರ್, ಆಂಜನೇಯ, ಹೊನ್ನಾಪುರ ಹೋಬಳಿ ಘಟಕದ ಅಧ್ಯಕ್ಷ ವಿನೋದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.