ADVERTISEMENT

ಯುವತಿ ಏಕಾಂಗಿ ಹೋರಾಟ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 9:27 IST
Last Updated 5 ಸೆಪ್ಟೆಂಬರ್ 2013, 9:27 IST

ಮೈಸೂರು: ಕೆ.ಆರ್. ನಗರ ಪುರಸಭಾ ಮಾಜಿ ಅಧ್ಯಕ್ಷ ತಮ್ಮನಾಯಕರ ಪುತ್ರ ಟಿ. ನಂದೀಶ್ ಲೈಂಗಿಕ ಕಿರುಕುಳ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದು ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಗೌರಮ್ಮ ಎಂಬವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿದರು.

ಕೆ.ಆರ್. ನಗರದಲ್ಲಿ ಒಬ್ಬಳೇ ವಾಸ ಮಾಡುತ್ತಿದ್ದ ನಾನು ಪದವಿಯಲ್ಲಿ ಇಂಗ್ಲಿಷ್ ಅನುತ್ತೀರ್ಣಗೊಂಡಿದ್ದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ನಂದೀಶ್ ಅವರು ನಡೆಸುತ್ತಿದ್ದ ವಿನ್ನರ್ ಟ್ಯುಟೊರಿಯಲ್‌ಗೆ ಸೇರಿಕೊಂಡೆ. ಅವರು ನನ್ನನ್ನು ಪ್ರೀತಿಸತೊಡಗಿದರು. ಇದಕ್ಕೆ ನಿರಾಕರಿಸಿದೆ. ನಿನ್ನನ್ನೇ ಮದುವೆ ಆಗುತ್ತೇನೆ. ಒಪ್ಪದಿದ್ದರೆ ಸಾಯುತ್ತೇನೆ ಎಂದು ಬೆದರಿಕೆ ಹಾಕಿದರು. ವಿಧಿ ಇಲ್ಲದೆ ಒಪ್ಪಿಕೊಂಡೆ ಎಂದು ನೊಂದ ಗೌರಮ್ಮ ತಿಳಿಸಿದರು.

ಟ್ಯುಟೊರಿಯಲ್‌ನಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನನ್ನ ಒಪ್ಪಿಗೆ ಇಲ್ಲದೆ ಬಲಾತ್ಕಾರ ಮಾಡಿದರು. ಕಾಲೇಜು ಉಪನ್ಯಾಸಕನಾಗಿದ್ದು, ಈ ವಿಷಯವನ್ನು ಬಹಿರಂಗಪಡಿಸಬಾರದು. ಮನೆಯವರನ್ನು ಒಪ್ಪಿಸಿ ಮದುವೆ ಆಗುತ್ತೇನೆ. ಸ್ವಲ್ಪ ದಿನ ಕಾಯುವಂತೆ ಒಪ್ಪಿಸಿದರು. ಆದರೆ ಐದು ವರ್ಷಗಳಿಂದ ಮದುವೆ ಆಗದೆ ಸತಾಯಿಸುತ್ತಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ನಿರಂತರವಾಗಿ ಬಲಾತ್ಕಾರ ಮಾಡುತ್ತಲೇ ಬಂದಿದ್ದಾರೆ. ಒಪ್ಪದಿದ್ದರೆ ಹಲ್ಲೆ ಮಾಡುತ್ತಿದ್ದರು.

ಈ ಸಂಬಂಧ ಪೊಲೀಸರಿಗೆ, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದೂರು ಕೊಟ್ಟು ಪೊಲೀಸರಿಗೆ ಒಪ್ಪಿಸಿದರೂ ಜಾಮೀನಿನ ಮೇಲೆ ಬಿಡುಗಡೆ ಆಗುವುದಾಗಿ ಬೆದರಿಸುತ್ತಾರೆ. ಅವರ ಕುಟುಂಬದವರಿಂದ ಜೀವ ಬೆದರಿಕೆ ಇದೆ. ನನಗೆ ಅವರೊಂದಿಗೆ ಮದುವೆ ಮಾಡಿಸಬೇಕು, ಸೂಕ್ತ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.