ADVERTISEMENT

ಶಾಸಕರ ವಿರುದ್ಧ ಸಂಸದ ಗರಂ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 9:55 IST
Last Updated 15 ಅಕ್ಟೋಬರ್ 2011, 9:55 IST

ಕೆ.ಆರ್.ನಗರ: ಶಾಸಕ ಸಾ.ರಾ. ಮಹೇಶ್ ಅವರು ವಿಶ್ವಾಸ ರಾಜ ಕಾರಣಕ್ಕೆ ಯೋಗ್ಯರೂ ಅಲ್ಲ, ಅರ್ಹರೂ ಅಲ್ಲ~ ಎಂದು ಸಂಸದ ಅಡಗೂರು ಎಚ್. ವಿಶ್ವನಾಥ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮಾಜಿ ಸಚಿವ ಎಸ್.ನಂಜಪ್ಪನವರ ಕಾಲದಿಂದ ವಿಶ್ವಾಸ ರಾಜಕಾರಣ ಮಾಡುತ್ತ ಬಂದಿದ್ದೇವೆ. ಆದರೆ ಶಾಸಕ ಸಾ.ರಾ.ಮಹೇಶ್ ಅದಕ್ಕೆ ವಿರುದ್ಧವಾದವರು. ಸಾ.ರಾ. ಮಹೇಶ್ ಅವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದ ಅವರು, ದುಡ್ಡಿನ ಧಿಮಾಕು ಬಹಳ ದಿನ ನಡೆಯುವುದಿಲ್ಲ. ಅದರಿಂದ ಬಹಳ ಜನ ಜೈಲಿಗೂ ಹೋಗಿದ್ದಾರೆ ಎಂದರು.

ತಾಲ್ಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸಿದವರು ಕಾಂಗ್ರೆಸ್‌ನವರು, ಆದರೆ ಅದನ್ನು ಅಡ ಇಟ್ಟಿರುವವರು ಜೆಡಿಎಸ್‌ನವರು. ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದ ಅಂಬಿಕಾ ಶುಗರ್ಸ್‌ನವರು ಕರಾರಿನಂತೆ ಸರ್ಕಾರಕ್ಕೆ ರೂ.12ಕೋಟಿ ಕಟ್ಟಬೇಕಾಗಿದೆ.
 

ಹಣ ಕಟ್ಟದೇ ಸಕ್ಕರೆ ಮಾರಾಟ ಮಾಡ ಬಾರದು ಎಂದು ಹಿಂದಿನ ಡಿಸಿ ಹರ್ಷ ಗುಪ್ತ ಆದೇಶ ಮಾಡಿದ್ದರು. ಆದರೆ 37 ಸಾವಿರ ಟನ್ ಸಕ್ಕರೆ ಮಾರಾಟ ಮಾಡ ಲಾಗಿದೆ. ಸಕ್ಕರೆ ಮಾರಾಟ ಮಾಡಲು ಗುತ್ತಿಗೆದಾರರಿಗೆ ಯಾರು ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಅಂಬಿಕಾ ಶುಗರ್ಸ್‌ನವರಿಂದ ಕಾರ್ಖಾನೆ ಬೇರೆಯವರಿಗೆ ಹೋಗುತ್ತದೆ ಎಂದು ತಿಳಿದು ಶಾಸಕ ಸಾ.ರಾ.ಮಹೇಶ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋ ರಾತ್ರಿ ಧರಣಿ ಕುಳಿತರೇ ಹೊರತು ರೈತರ ಪರವಾಗಿ ಅಲ್ಲ ಎಂದರು.
ಶ್ರೀರಾಮ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಎ.ಎಸ್.ಚನ್ನಬಸಪ್ಪ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ಕೆ.ಪಿ.ಪ್ರಭುಶಂಕರ್, ಪುರಸಭೆ ಮಾಜಿ ಅಧ್ಯಕ್ಷ ರಿಜ್ವಾನ್ ಉಲ್ಲಾ ಖಾನ್, ಪುರಸಭೆ ಮಾಜಿ ಸದಸ್ಯ ರಾಜಾ ಶ್ರೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT